ನಲ್ಲೂರು (ಚನ್ನಗಿರಿ): ‘ಸಾಸ್ವೆಹಳ್ಳಿ, ಕಮ್ಮಾರಘಟ್ಟ ಹಾಗೂ ಜಗಳೂರು ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ನಲ್ಲೂರು ಗ್ರಾಮದಿಂದ ಸೋಮವಾರ ಪಾದಯಾತ್ರೆ ಆರಂಭಿಸಲಾಯಿತು.
‘ಮೂರು ದಿನ ಪಾದಯಾತ್ರೆ ನಡೆಸಿ, ಫೆಬ್ರುವರಿ 22ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನಿಷ್ಠ ಬೆಲೆಗಿಂತ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುವ ಖರೀದಿದಾರನಿಗೆ 6 ತಿಂಗಳು ಜೈಲು ಶಿಕ್ಷೆ, ಪರವಾನಗಿ ರದ್ದು, ಚನ್ನಗಿರಿ ತಾಲ್ಲೂಕಿನಲ್ಲಿ ಗರದಕಟ್ಟೆ ಸರ್ವೆ ನಂ 1 ಮತ್ತು ಎನ್. ಗಾಣದಕಟ್ಟೆ ಸರ್ವೆ ನಂ–7 ಹಾಗೂ ಶಿವಗಂಗೆಹಾಳ್ ಸರ್ವೆ ನಂ–4ರಲ್ಲಿ ಎಂಪಿಎಂ ಮಿಲ್ಗೆ ನೀಡಿದ್ದ ಲೀಸ್ ಅವಧಿ ಮುಕ್ತಾಯಗೊಂಡಿದ್ದು, ಈ ಜಮೀನನ್ನು ಬಗರ್ಹುಕುಂ ಸಾಗುವಳಿದಾರರಿಗೆ ನೀಡಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದರು.
‘ಅರ್ಜಿ ನಮೂನೆ 50, 53, 57ರಲ್ಲಿ ಬಗರ್ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳನ್ನು ವಜಾಗೊಳಿಸಿದ್ದು, ಕೂಡಲೇ ಈ ಅರ್ಜಿಗಳನ್ನು ಮರುಪರಿಶೀಲನೆ ಮಾಡಬೇಕು. ಅಕ್ರಮ-ಸಕ್ರಮ ವಿದ್ಯುತ್ ಯೋಜನೆ ಆರಂಭಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಸೇನೆ ತಾಲ್ಲೂಕು ಘಟಕದ ಎಸ್.ಆರ್.ರವಿಕುಮಾರ್, ಗಂಡುಗಲಿ, ಶರಣಮ್ಮ, ರಂಗನಾಥ, ಯೇಸುದಾಸ್, ಅಣ್ಣಪ್ಪ, ಉಮೇಶ್, ನಾಗರಾಜ್, ಮಂಜುನಾಥ್, ಪ್ರಕಾಶ್ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.