ದಾವಣಗೆರೆ: ಮುಂಬೈನಿಂದ ದಾವಣಗೆರೆಗೆ ಪೂರೈಕೆ ಮಾಡಿದ್ದ 400 ವಾಟರ್ ಕೂಲರ್ಗಳ ಇ-ವೇಬಿಲ್ ಸೃಜನೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ವಸ್ತುಗಳನ್ನು ಪರಿಶೀಲನೆ ಅವರು ಮಾತನಾಡಿದರು.
ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳು ಮಾರ್ಚ್ 22ರಂದು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಟರ್ ಕೂಲರ್ ಸಾಗಣೆ ಮಾಡಿದ ವಾಹನಗಳನ್ನು ಪರಿಶೀಲಿಸಿದ್ದರು. ₹ 3.11 ಲಕ್ಷ ಮೌಲ್ಯದ 400 ವಾಟರ್ ಕೂಲರ್ಗಳನ್ನು ಹರಿಹೊಂ ಎಂಟರ್ಪ್ರೈಸಸ್ಗೆ ಪೂರೈಸಲಾಗಿತ್ತು. ವಾಹನ ತಪಾಸಣೆ ಮಾಡುವುದಕ್ಕಿಂತ 3 ಗಂಟೆ ಮೊದಲು ಮಾತ್ರ ಇ–ವೇಬಿಲ್ ಸೃಜನೆಯಾಗಿರುವುದು ಕಂಡು ಬಂದಿತ್ತು.
ಮುಂಬೈನಿಂದ ದಾವಣಗೆರೆಗೆ ಬರಲು ಕನಿಷ್ಠ 18 ಗಂಟೆ ಪ್ರಯಾಣದ ಅವಧಿಯಾಗಲಿದೆ. ವಾಹನ ವಶಕ್ಕೆ ಪಡೆಯುವುದಕ್ಕಿಂತ 3 ಗಂಟೆ ಮೊದಲು ಆನ್ಲೈನ್ ಬಿಲ್ ಸೃಜನೆ ಮಾಡಿರುವುದು ಜಿ.ಎಸ್.ಟಿ. ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.
ಮಾರ್ಚ್ 22 ರಂದು ಅವುಗಳನ್ನು ವಶಕ್ಕೆ ಪಡೆದು ಎಫ್.ಎಸ್.ಟಿ.ಗೆ ತನಿಖೆಗೆ ವಹಿಸಲಾಗಿತ್ತು. ಸ್ಪಷ್ಟನೆ ನೀಡದ ಕಾರಣ ಇದು ಚುನಾವಣಾ ಸಂದರ್ಭದಲ್ಲಿ ವಿತರಣೆಗೆ ಬಳಸಲು ಉದ್ದೇಶಿಸಿರಬೇಕೆಂದು ಅನುಮಾನಿಸಲಾಗಿದೆ.
ಸಹಾಯಕ ಚುನಾವಣಾಧಿಕಾರಿ ರೇಣುಕಾ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆ ತನಿಖಾಧಿಕಾರಿ ನಟರಾಜ್ ಉಪಸ್ಥಿತರಿದ್ದರು.