ದಾವಣಗೆರೆ: ‘ಅಪರಿಚಿತರು ನೀಡುವ ಉದ್ಯೋಗದ ಆಮಿಷವನ್ನು ನಂಬಿ ಸಾರ್ವಜನಿಕರು ಮೋಸ ಹೋಗಬಾರದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಅಡುಗೆ ಮತ್ತಿತರ ಕೆಲಸ ಕೊಡಿಸುವುದಾಗಿ ನಂಬಿಸಿ ₹ 1 ಲಕ್ಷಕ್ಕೆ ಮಹಿಳೆಯೊಬ್ಬರನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ‘ಪ್ರಜಾವಾಣಿ’ಗೆ ಅವರು ಪ್ರತಿಕ್ರಿಯಿಸಿದರು. ಆ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
‘ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಅಪರಿಚಿತರು ಹೇಳಿದರೆ ಅವರನ್ನು ನಂಬಬಾರದು. ಉದ್ಯೋಗದ ಆಸೆಗಾಗಿ ಅಪರಿಚಿತರಿಗೆ ಹಣವನ್ನೂ ನೀಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.
‘ಉದ್ಯೋಗ ನೀಡುವ ಸಂಸ್ಥೆಯ ಬಗ್ಗೆ, ವ್ಯಕ್ತಿಗಳ ಬಗ್ಗೆ ಪೂರ್ವಾಪರ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಅಗತ್ಯವಿದ್ದರೆ ಪೊಲೀಸ್ ಇಲಾಖೆಯಿಂದಲೂ ನೆರವು ಪಡೆಯಿರಿ’ ಎಂದು ತಿಳಿಸಿದ್ದಾರೆ.