ದಾವಣಗೆರೆ: ‘ಸಂಸದ ಜಿ.ಎಂ.ಸಿದ್ದೇಶ್ವರ ಅವರ ಧೋರಣೆ ವಿರೋಧಿಸಿ ಏಪ್ರಿಲ್ 23ರಂದು ಸಂಜೆ 4 ಗಂಟೆಗೆ ನಗರದ ಚೇತನ ಹೋಟೆಲ್ನ ಸಭಾಂಗಣದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿ ತ್ಯಜಿಸಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ’ ಎಂದು ಪಂಚಮಸಾಲಿ ಸಮಾಜದ ಎಚ್.ಎಸ್.ನಾಗರಾಜ್ ತಿಳಿಸಿದರು.
‘2009ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ 3 ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡಿದ್ದರೂ, ಅಧಿಕಾರ ಅನುಭವಿಸಿದವರು ನನ್ನ ಕಡೆಗಣಿಸಿದ್ದಾರೆ. ಇದರಿಂದ ನೋವು ಅನುಭವಿಸಿದ್ದು, ಕಾಂಗ್ರೆಸ್ ಸೇರುತ್ತಿದ್ದೇನೆ’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಜಿಲ್ಲಾ ಬಿಜೆಪಿಯಲ್ಲಿ ಯಾರೋ ಕಟ್ಟಿದ ಮನೆಯಲ್ಲಿ ಇನ್ಯಾರೋ ಬಂದು ಅಧಿಕಾರ ಅನುಭವಿಸುತ್ತಿದ್ದಾರೆ. ಸಂಸದರು ಕ್ಷೇತ್ರದ ಅಭಿವೃದ್ಧಿ ಬದಲು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ. ಕಾರ್ಯಕರ್ತರು, ಮುಖಂಡರನ್ನು ಬಳಸಿಕೊಂಡು ಬಿಸಾಡಿದ್ದಾರೆ’ ಎಂದು ದೂರಿದರು.
‘ಸಂಸದರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಬೇರೆಯವರಿಗೆ ಪಕ್ಷ ವಿರೋಧಿ ಎನ್ನುವ ಸಿದ್ದೇಶ್ವರ ಅವರು, ತಾವು ಬಿಜೆಪಿ ಸಂಸದರಾಗಿ ಕೆಜೆಪಿ ಪಕ್ಷದ ಟಿಕೆಟ್ ನೀಡಿದ ಬಗ್ಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
‘ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ ಕಾರ್ಮಿಕರು, ಜನರಿಗಾಗಿ ಬೇಡಿಕೆ ಇಡಲಾಗಿತ್ತು. ನೀವು ಕೊಟ್ಟ ಮಾತನ್ನು ಈಡೇರಿಸಲಿಲ್ಲ. ಈ ಬಗ್ಗೆ ನೈತಿಕತೆ ಇದ್ದರೆ ಉತ್ತರ ಕೊಡಿ’ ಎಂದರು.
ಮುಖಂಡರಾದ ಎಂ.ಜೈಕುಮಾರ್, ವೀರಭದ್ರಪ್ಪ, ಆನಂದಪ್ಪ, ಸೋಗಿ ಶಾಂತಕುಮಾರ್, ಹುಲ್ಮನೆ ಗಣೇಶ್, ಇಬ್ರಾಹಿಂ ಸಾಬ್, ಕಲ್ಲಿಂಗಪ್ಪ, ರಾಜಣ್ಣ, ಬುತ್ತಿ ಹುಸೇನ್, ಆಂಜನೇಯ, ರಾಜಾನಾಯ್ಕ, ರಾಮಚಂದ್ರ, ಫುಟ್ಬಾಲ್ ಗಿರೀಶ್, ಸಂಗನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.