ದಾವಣಗೆರೆ: ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ 5 ಜನ ಅಂತರರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ದುರ್ಯೋಧನ, ರಮೇಶ ಸೋಪಾನ, ಲಕ್ಷ್ಮಣ್, ಲಕ್ಷ್ಮಣ ಜಾಧವ್, ಗಣೇಶ ಬಂಧಿತರು.
ಬಂಧಿತರಿಂದ ಕಬ್ಬಿಣದ ರಾಡ್, ಜಾಲರಿ ಕಟ್ಟರ್, ವೈರ್ ಕಟ್ಟರ್, ಚಾಕುಗಳು, 3 ಹಗ್ಗಗಳು, ಕಪ್ಪು ಬಣ್ಣದ ಮಾಸ್ಕ್, ಕಾರದ ಪುಡಿ ಪ್ಯಾಕೆಟ್ಗಳು, ಗಮ್ ಟೇಪ್, ಬ್ಯಾಗ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
‘ಆರೋಪಿಗಳು ಬೆಂಗಳೂರಿನಿಂದ ಬಂಗಾರದ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ವ್ಯಾಪಾರಿ ಬಳಿ ಇದ್ದ 11 ಕೆ.ಜಿ. ಗೂ ಹೆಚ್ಚಿನ ಬಂಗಾರದ ಆಭರಣವನ್ನು ದರೋಡೆ ಮಾಡುವ ಸಂಚು ರೂಪಿಸಿದ್ದರು. ಅದಕ್ಕಾಗಿ ವ್ಯಾಪಾರಿ ತಂಗಿದ್ದ ಲಾಡ್ಜ್ ಬಳಿಯೇ ಹೊಂಚು ಹಾಕಿದ್ದರು. ಅದು ವಿಫಲವಾಗಿದ್ದರಿಂದ ವಾಪಸ್ ಹೋಗಲು ನಿರ್ಧರಿಸಿದ್ದು, ಖರ್ಚಿಗಾಗಿ ನಗರದಲ್ಲಿ ಸಂಚರಿಸಿ ರಾತ್ರಿ ವೇಳೆ ದರೋಡೆಗೆ ಯತ್ನಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.