ಬಸವನಹಳ್ಳಿ (ನ್ಯಾಮತಿ): ಗ್ರಾಮದಲ್ಲಿ ಸ್ಮಶಾನ ಜಾಗ ನೀಡಲು ಅಧಿಕಾರಿಗಳು ಒಪ್ಪಿಗೆ ನೀಡಿದ ಕಾರಣ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಸ್ಮಶಾನ ಜಾಗಕ್ಕೆ ಆಗ್ರಹಿಸಿ ಗ್ರಾಮಸ್ಥರು ಭಾನುವಾರ ಮೃತಪಟ್ಟ ದೊಡ್ಡಪ್ಪ ಅವರ ಶವವನ್ನು ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಇಟ್ಟು ಪ್ರತಿಭಟನೆ ನಡೆಸಿದ್ದರು.
ಜಾಗ ನೀಡುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಮನವೊಲಿಸಿದರು.
ನಂತರ ರಾತ್ರಿ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
‘ತಾಲ್ಲೂಕು ಆಡಳಿತದಿಂದ 2 ಎಕರೆ ಸ್ಮಶಾನ ಜಾಗವನ್ನು ಗುರುತಿಸಲಾಗಿತ್ತು. ಗ್ರಾಮಸ್ಥರಿಗೆ ಅಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸೂಚಿಸಲಾಗಿತ್ತು. ಆದರೆ ಗ್ರಾಮದಿಂದ ದೂರವಿದೆ ಎಂಬ ಕಾರಣದಿಂದ ಅದನ್ನು ಉಪಯೋಗಿಸುತ್ತಿರಲಿಲ್ಲ. ಪಿಡಿಒ ಹಾಗೂ ಅಧಿಕಾರಿಗಳು ಗಮನಹರಿಸಿ ಮತ್ತೊಮ್ಮೆ ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡುವಂತೆ ಸೂಚಿಸಿದೆವು. ಇದಕ್ಕೆ ಗ್ರಾಮಸ್ಥರು ಒಪ್ಪಿದರು’ ಎಂದು ತಹಶೀಲ್ದಾರ್ ತಿಳಿಸಿದರು.
ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್. ರವಿ, ಕಂದಾಯ ನಿರೀಕ್ಷಕ ಆರ್. ಸಂತೋಷ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.