ದಾವಣಗೆರೆ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ರಾಮತಾರಕ ಹೋಮ, ಹನುಮಾನ್ ಚಾಲೀಸ್, ರಾಮಭಜನೆಗಳು ನಡೆದವು. ಸಂಜೆ ವೇಳೆ ಮನೆಮನೆಗಳಲ್ಲಿ ದೀಪಗಳು ಪ್ರಜ್ವಲಿಸಿದವು.
ನಗರದ ಪಿ.ಜೆ. ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನದಲ್ಲಿ ಆವರಣದಲ್ಲಿ ಬೆಳಿಗ್ಗೆ ಪತಂಜಲಿ ಯೋಗಸಮಿತಿಯಿಂದ ಯೋಗ ಶಿಬಿರ, ಹನುಮಾನ್ ಚಾಲೀಸ, ವಿಷ್ಣು ಸಹಸ್ರನಾಮ ಹಾಗೂ ಅಗ್ನಿಹೋತ್ರಿ ಹೋಮ ನಡೆದವು.
ಬಳಿಕ ರಾಮನ ಮೂಲ ಮೂರ್ತಿಗೆ ರುದ್ರಮಂತ್ರ, ಸ್ತ್ರೀಸೂಕ್ತ ಮತ್ತು ಪುರುಷ ಸೂಕ್ತದಿಂದ ಅಭಿಷೇಕ ಹಾಗೂ ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಗಣಹೋಮ, ನವವಗ್ರಹ ಹೋಮ, ರಾಮತಾರಕ ಹೋಮ, ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಜೈನ್ ಸಮಾಜದಿಂದ ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ದರ್ಶನ, ಭಜನೆ, ದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಗರದ ವಿವಿಧ ದೇವಸ್ಥಾನಗಳಾದ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ, ಹರಳೆಣ್ಣೆ ಕೊಟ್ರಬಸಪ್ಪ (ರಾಮ್ ಆ್ಯಂಡ್ ಕೋ) ವೃತ್ತದ ಗಣೇಶ ದೇವಸ್ಥಾನ, ಎಸ್.ಎಸ್. ಬಡಾವಣೆಯ ವರ್ತುಲ ರಸ್ತೆಯಲ್ಲಿನ ಶಾರದಾಂಬ ದೇವಸ್ಥಾನ ಸೇರಿದಂತೆ ನಗರದ ಇನ್ನಿತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಣೆ ಮಾಡಲಾಯಿತು.
ನಗರದ ಬನ್ನಿ ಮಹಾಂಕಾಳಿ ದೇವಿ ಹಾಗೂ ವರದಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಪೂಜೆಯನ್ನು ನೆರವೇರಿಸಲಾಯಿತು. ಬಿ. ಲಿಂಗರಾಜ್, ಯೋಗೇಶ್ ಡಿ. ಪಿ., ಬೀರಣ್ಣ, ಮಾರುತಿ, ಸುನಿಲ್, ಅನಿಲ್, ಕವಿರಾಜ್, ಮಾರುತಿ, ಅಶೋಕ್, ಗಣೇಶ್, ಮಂಜು, ಶ್ರೀಕಾಂತ್, ಭವಾನಿ, ಶಾಮ್ಸುಂದರ್, ಸುನಿಲ್, ರಾಜಣ್ಣ, ಮನು, ಹನುಮೇಶ್, ಪ್ರದೀಪ್, ಪವನ್, ಮಾರ್ತಾಂಡ ಇದ್ದರು.
18 ಕೋಟಿ ಬಾರಿ ರಾಮ ತಾರಕ ಮಂತ್ರ ಜಪ
ನಗರದ ಪಿ.ಜೆ. ಬಡಾವಣೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶ್ರೀರಾಮ ತಾರಕ ಹೋಮ ನಡೆಯಿತು. ವಿಜಯದಶಮಿಯಿಂದ ಪ್ರಾರಂಭಿಸಿ ಪ್ರತಿನಿತ್ಯ ವಿವಿಧ ಸಮಾಜದ ಭಜನಾ ಮಂಡಳಿಗಳು ದೇವಸ್ಥಾನಗಳು ಹಾಗೂ ಮನೆಗಳಲ್ಲಿ ಶ್ರೀರಾಮ ತಾರಕ ಮಂತ್ರವನ್ನು (ಶ್ರೀರಾಮ ಜಯರಾಮ ಜಯ ಜಯರಾಮ) ಸುಮಾರು 1878 ಕೋಟಿ ಬಾರಿ ಜಪಿಸಿದ್ದು ಈ ವೇಳೆ ಸಮರ್ಪಿಸಲಾಯಿತು.
ದಾವಣಗೆರೆ ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನಂದ ಕಿಶೋರ ಭಜನಾ ಮಂಡಲಿ ಅನುಶ್ರೀ ಸಂಗೀತ ವಿದ್ಯಾಲಯ ಶ್ರೀ ರಾಜರಾಜೇಶ್ವರಿ ಸಂಘ ಹಾಗೂ ಬ್ರಾಹ್ಮಣ ಸಮಾಜ ಮಹಿಳಾ ವಿಭಾಗಗಳಿಂದ ಭಜನೆ ಕಾರ್ಯಕ್ರಮ ನಡೆಯಿತು.
ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ರಾಮತಾರಕ ಹೋಮ ನಡೆದು ಮಧ್ಯಾಹ್ನ ಪೂರ್ಣಾಹುತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆಗೆ ಎಲ್ಇಡಿ ಪರೆದೆಯನ್ನು ಹಾಕಲಾಗಿತ್ತು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್ ಕಾರ್ಯದರ್ಶಿಗಳಾದ ಎಸ್. ಗೋಪಾಲದಾಸ್ ಉಪಾಧ್ಯಕ್ಷರಾದ ಡಾ. ಆನಂದತೀರ್ಥಾಚಾರ್ ಎಸ್.ಪಿ. ಸತ್ಯನಾರಾಯಣರಾವ್ ಉಮೇಶ್ ಕುಲಕರ್ಣಿ ಶೇಷಾಚಲ ಡಿ ಉಮಾಕಾಂತ್ ದೀಕ್ಷಿತ್ ಪಿ.ಜಿ. ನಿರಂಜನ್ ಯು. ಬಾಲಕೃಷ್ಣ ವೈದ್ಯ ಎನ್. ರಾಮದಾಸ್ ಭಾಸ್ಕರ ಗಜಾನನ ಭಟ್ ಎಲ್. ರಾಮಚಂದ್ರರಾವ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ. ಟಿ. ಅಚ್ಯುತ ಮೊದ ಮೊದಲಾದ ಆಸ್ತಿಕ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.