ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಬಾಲಕನ ಮೇಲೆ ಅತ್ಯಾಚಾರ; 20 ವರ್ಷ ಜೈಲು ಶಿಕ್ಷೆ

Published 17 ಮಾರ್ಚ್ 2024, 7:18 IST
Last Updated 17 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ದಾವಣಗೆರೆ: ಬಾಲಕನ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌  ಎಫ್.ಟಿ.ಎಸ್.ಸಿ-1 ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹ 25,000 ದಂಡ ವಿಧಿಸಿದೆ.

ನಗರದ ನಿವಾಸಿ ಆಂಜನೇಯ ಅಲಿಯಾಸ್‌ ಅನು ಶಿಕ್ಷೆಗೊಳಗಾದ ಅಪರಾಧಿ. ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ 2022ರಲ್ಲಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿ ಎಂ.ಆರ್.ಚೌಬೆ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶ ಶ್ರೀಪಾದ್ ಎನ್. ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸಂತ್ರಸ್ತ ಬಾಲಕನಿಗೆ ಸರ್ಕಾರದಿಂದ ₹ 6 ಲಕ್ಷ ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.

ರೈತ ಆತ್ಮಹತ್ಯೆ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಚಿಕಡದಕಟ್ಟೆ ಗ್ರಾಮದಲ್ಲಿ ರೈತರೊಬ್ಬರು ಅಡಿಕೆ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ನಿವಾಸಿ ಆರ್.ಪ್ರಸನ್ನ (38) ಮೃತರು.

‘ಗ್ರಾಮದಲ್ಲಿ ಅಡಿಕೆತೋಟ ಇದೆ. 4-5 ವರ್ಷಗಳಿಂದ ಜಮೀನಿನ ಅಭಿವೃದ್ಧಿಗೆಂದು ಕೃಷಿ ಸಂಘದಲ್ಲಿ ₹ 1.20 ಲಕ್ಷ ಹಾಗೂ ಧರ್ಮಸ್ಥಳ ಸಂಘದಲ್ಲಿ ₹ 3 ಲಕ್ಷ ಸಾಲ ಮಾಡಿದ್ದಾರೆ. ತೋಟದಲ್ಲಿ ಕೊಳವೆಬಾವಿಗಳನ್ನು ಕೊರೆಸಿದ್ದು, ನೀರು ಬತ್ತಿ ಹೋಗಿದೆ. ಸರಿಯಾಗಿ ಮಳೆಯಾಗದ್ದರಿಂದ ಸಾಲ ಹೇಗೆ ತೀರಿಸುವುದು ಎಂದು ಆತಂಕಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಮೃತರ ಪತ್ನಿ ಕಾಂಚನಾ ದೂರು ನೀಡಿದ್ದಾರೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಶ್ಯಾವಾಟಿಕೆ; ಪ್ರಕರಣ ದಾಖಲು

ದಾವಣಗೆರೆ: ನಗರದ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಕೆ.ಬಿ.ಬಡಾವಣೆಯ ನಿವಾಸಿ ಶಾಂತಮ್ಮ ಎಂಬುವವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೆಣ್ಣುಮಕ್ಕಳನ್ನು ಹಣದ ಆಮಿಷ ಒಡ್ಡಿ ಬೇರೆ ಕಡೆಯಿಂದ ಕರೆಯಿಸಿಕೊಂಡು ಬಾಡಿಗೆ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳೆನಾಶಕ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

ದಾವಣಗೆರೆ: ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ ಯುವಕ ಮಂಜುನಾಥ ಎಚ್.ಸಿ. (28) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

‘ನನ್ನ ಮಗ ಮದುವೆ ಆಗುವ ಯೋಗ ಯಾವಾಗ ಬರುವುದೋ ಅಂತಾ ಮನೆಯಲ್ಲಿ ಜಿಗುಪ್ಸೆಯಿಂದ ವರ್ತಿಸುತ್ತಿದ್ದ. ಅದೇ ಕೊರಗಿನಲ್ಲಿ ಮಾರ್ಚ್‌ 9ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಮಾ.15ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ’ ಎಂದು ಮೃತ ಯುವಕನ ತಾಯಿ ರುದ್ರಮ್ಮ ದೂರು ನೀಡಿದ್ದಾರೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT