ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಶ್ರಯ ಮನೆ’ಗಳಿಂದ ಮನೆಮಾತಾಗಿದ್ದ ಕೆ.ಶಿವರಾಂ

Published 1 ಮಾರ್ಚ್ 2024, 6:49 IST
Last Updated 1 ಮಾರ್ಚ್ 2024, 6:49 IST
ಅಕ್ಷರ ಗಾತ್ರ

ದಾವಣಗೆರೆ: ಹೊಸ ಸಹಸ್ರಮಾನದ ಆರಂಭದಲ್ಲಿನ ಮೂರು ವರ್ಷಗಳ (2000–2002) ಕಾಲ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಜಿಲ್ಲೆಯಲ್ಲಿ 15,000ಕ್ಕೂ ಹೆಚ್ಚು ವಸತಿರಹಿತರಿಗೆ ಆಶ್ರಯ ಮನೆಗಳು ದೊರೆಯುವಂತೆ ಮಾಡಿದ್ದರು. ಅಲ್ಲದೇ ‘ನಮ್ಮ ನಾಡು’, ‘ಜನರ ನಡುವೆ ಜಿಲ್ಲಾಡಳಿತ’ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದರು.

‘ದಿನಕ್ಕೆ ಇಂತಿಷ್ಟು ಹಳ್ಳಿ ನಿಗದಿಪಡಿಸಿಕೊಂಡು ಆ ಹಳ್ಳಿಗಳಿಗೆ ಅಧಿಕಾರಿಗಳು ಬಸ್‌ನಲ್ಲಿ ತೆರಳಿ ಜನರ ಸಮಸ್ಯೆಗಳನ್ನು ಅರಿತು ಬಗೆಹರಿಸುತ್ತಿದ್ದರು. ಈ ರೀತಿಯ ಜನಸ್ಪಂದನ ಹಿಂದೆ ಯಾವ ಅಧಿಕಾರಿಯೂ ಮಾಡಿರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ  ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ.

‘ಎಸ್‌ಒಜಿ ಕಾಲೊನಿ, ಎಸ್.ಎಂ.ಕೃಷ್ಣ ನಗರ, ಎಸ್‌.ಎಸ್.ಪಿ. ನಗರ, ಅಶ್ವತ್ಥ್‌ ರೆಡ್ಡಿ ನಗರ, ವೈ.ನಾಗಪ್ಪ ಬಡಾವಣೆಗಳಲ್ಲಿ ಸಾವಿರಾರು ಜನರಿಗೆ ಮನೆಗಳನ್ನು ಕೊಡಿಸುವಲ್ಲಿ ಕೆ.ಶಿವರಾಂ ಪ್ರಮುಖ ಪಾತ್ರವಹಿಸಿದ್ದರು’ ಎಂದು ಗುರುವಾರ ಮೃತರಾದ ನೆಚ್ಚಿನ ಅಧಿಕಾರಿಯ ಕೆಲಸವನ್ನು ಅವರು ಸ್ಮರಿಸಿದರು.

‘ದಲಿತರು, ಆರ್ಥಿಕವಾಗಿ ಹಿಂದುಳಿದವರು, ಅಂಗನವಾಡಿ ಕಾರ್ಯಕರ್ತೆಯರು, ಆಟೊ, ಲಾರಿ ಚಾಲಕರು, ಕ್ಲೀನರ್‌ಗಳು,  ಕಡುಬಡವರು ಹಾಗೂ ಕೂಲಿ ಕಾರ್ಮಿಕರನ್ನು ಗುರುತಿಸಿ ಮನೆಗಳ ಹಕ್ಕು ಪತ್ರ ನೀಡಿದ್ದರು. ಆವರಗೆರೆಯಲ್ಲಿ ಇಬ್ಬರಿಂದ ಒಟ್ಟು 7 ಎಕರೆ ಜಾಗ ಖರೀದಿಸಿ ಸ್ಮಶಾನಕ್ಕೆ ನೀಡಿದ್ದರು. ಚಿಕ್ಕಬೂದಿಹಾಳು ಗ್ರಾಮಕ್ಕೂ ಜಾಗ ಕಾಯ್ದಿರಿಸಿದ್ದರು’ ಎಂದು ಕಾರ್ಮಿಕ ಮುಖಂಡ ಉಮೇಶ್ ಎಚ್.ಜಿ. ತಿಳಿಸಿದರು.

‘ಮಹಿಳೆಯರನ್ನು ಮುಟ್ಟಿನ ಸಂದರ್ಭ ಹಾಗೂ ಬಾಣಂತಿಯರನ್ನು ಊರಿನಿಂದ ಹೊರಗಿಡುವ ಅನಿಷ್ಠ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ತಾಲ್ಲೂಕಿನ ಗೊಲ್ಲರಹಟ್ಟಿಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಪರಿಶಿಷ್ಟರ ಮಕ್ಕಳಿಗೆ ಕ್ಷೌರ ಮಾಡಿಸುವ ಮೂಲಕ ಅರಿವು ಮೂಡಿಸಿದ್ದರು’ ಎಂದು ನೆನಪಿಸಿಕೊಂಡರು.

‘ಕೆ.ಶಿವರಾಂ ಅವರು ಆರಂಭಿಸಿದ ‘ನಮ್ಮ ನಾಡು’ ಕಾರ್ಯಕ್ರಮವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದ್ದರು. ಬಳಿಕ ಇದೇ ಮಾದರಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ನಗರದ ಹೈಸ್ಕೂಲ್ ಮೈದಾನದಲ್ಲಿ ಟೆನಿಸ್ ಕೋರ್ಟ್ ನಿರ್ಮಿಸುವಲ್ಲಿ ಕೆ.ಶಿವರಾಂ ಪ್ರಮುಖ ಪಾತ್ರವಹಿಸಿದ್ದರು. ದಾವಣಗೆರೆ ಜಿಲ್ಲೆಯಾದ ಕಾರಣ ಹಮ್ಮಿಕೊಳ್ಳುತ್ತಿದ್ದ ‘ದಾವಣಗೆರೆ ಹಬ್ಬ’ ಜಿಲ್ಲಾ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದರು’ ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಹೇಳುತ್ತಾರೆ.

‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಚ್ಚೆಸ್ಕೆ ಅವರ ಅಂಕಣ ‘ವಾರದಿಂದ ವಾರಕ್ಕೆ’ ನನಗೆ ಐಎಎಸ್‌ ಮಾಡಲು ತುಂಬಾ ಸಹಕಾರಿಯಾಯಿತು. ವಾರದ ರಾಜಕೀಯ ವಿದ್ಯಮಾನವನ್ನು ಕಟ್ಟಿಕೊಡುತ್ತಿತ್ತು. ಎಂದು ನನ್ನ ಬಳಿ ಪ್ರಸ್ತಾಪಿಸಿದ್ದರು’ ಎಂದು ಅವರು ನೆನಪಿನ ಸುರುಳಿ ಬಿಚ್ಚಿಟ್ಟರು.

‘ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಳ್ಳತನ ಹೆಚ್ಚಾಗುತ್ತಿತ್ತು. ಬೆಳಿಗ್ಗೆ ಸಂಪರ್ಕ ಕಡಿತ ಮಾಡಿ, ರಾತ್ರಿ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿತ್ತು. ಇದನ್ನು ಪತ್ತೆ ಹಚ್ಚಲು ಶಿವರಾಂ ಅವರು ಹಳ್ಳಿ ಜನರ ಬಳಿ ಹೋಗಿ ಅವರಿಂದಲೇ ಕರೆಂಟ್ ಹೇಗೆ ಪಡೆಯುವುದು? ಇದು ಕಾರ್ಯಸಾಧ್ಯನಾ? ಹೇಗೆ ಸಾಧ್ಯವಾಗುತ್ತೆ? ನೀವು ಕಡಿಮೆ ಏನಲ್ಲ ಬಿಡಿ ಎಂದು ಮಾತನಾಡುತ್ತಾ ಅವರಿಂದಲೇ ಮಾಹಿತಿ ಪಡೆಯುತ್ತಿದ್ದರು. ಬಡವರಾದರೆ ಎಚ್ಚರಿಕೆ ಕೊಟ್ಟು ಮುಂದೆ ತಪ್ಪೆಸಗದಂತೆ ಸೂಚನೆ ನೀಡುತ್ತಿದ್ದರು. ಶ್ರೀಮಂತರಾಗಿದ್ದರೆ ದಂಡ ವಿಧಿಸುತ್ತಿದ್ದರು’ ಎಂದು ಹೇಳಿದರು.

ಇವಿಷ್ಟೇ ಅಲ್ಲದೇ ಸಿಹಿ ತಿನಿಸು ತಯಾರಿಕೆ, ಮಂಡಕ್ಕಿ ಭಟ್ಟಿ, ಹೋಟೆಲ್‌ ಹಾಗೂ ಬಾರ್‌ಗಳಲ್ಲಿ ತೊಡಗಿದ್ದ ಬಾಲ ಕಾರ್ಮಿಕರ ರಕ್ಷಣೆ, ಸರ್ಕಾರಿ ಕಾಲೇಜು ಉಪನ್ಯಾಸಕರು ನಡೆಸುತ್ತಿದ್ದ ಟ್ಯೂಷನ್ ಹಾವಳಿ ನಿಲ್ಲಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ ಎಂದು ಜಿಲ್ಲೆಯ ಅನೇಕರು ಶಿವರಾಂ ಸೇವೆಯನ್ನು ಶ್ಲಾಘಿಸುತ್ತಾರೆ.

ಶ್ರದ್ಧಾಂಜಲಿ ಸಭೆ ನಾಳೆ

ಶಿವರಾಂ ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದಿಂದ ಮಾರ್ಚ್ 2ರಂದು ಬೆಳಿಗ್ಗೆ 11ಕ್ಕೆ ನಿಜಲಿಂಗಪ್ಪ ಬಡಾವಣೆಯ ಛಲವಾದಿ ಮಹಾಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT