ಹಳೇಮಳಲಿ (ನ್ಯಾಮತಿ): ‘ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೀಮಂತಿಕೆಯಿಂದ ಅಳೆಯುವುದು ತಪ್ಪಾಗುತ್ತದೆ. ಪ್ರತಿಯೊಬ್ಬರೂ ಅಂತರಂಗದ ಧ್ವನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಬಹುದು’ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನ್ಯಾಮತಿ ತಾಲ್ಲೂಕು ಹಳೇಮಳಲಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ಸ್ವಾಮಿಯ ನೂತನ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರ ಕಳಸಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಭಕ್ತರು ದೇಗುದ ಗರ್ಭಗುಡಿಯನ್ನು ಪವಿತ್ರ ತಾಣವಾಗಿ ಭಾವಿಸಿದಂತೆ ತಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಎಂಬುದು ತಪ್ಪು ಕಲ್ಪನೆ. ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆ ಆದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದು ಹೇಳಿದರು.
‘ಮನೆಯ ಹೆಣ್ಣು ಮಕ್ಕಳು ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತಬಾರದು. ಗ್ರಾಮದ ಗುರು ಹಿರಿಯರ ಸಮ್ಮಖದಲ್ಲಿ ತಮ್ಮ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಬೇರೊಬ್ಬರ ಜಗಳದಲ್ಲಿ ನ್ಯಾಯ ತೀರ್ಮಾನ ಮಾಡಿ ರಾಜಿ ಪಂಚಾಯಿತಿ ನಡೆಸುವ ನ್ಯಾಯಮೂರ್ತಿಗಳು ಅವರ ಮನೆಯಲ್ಲಿ ನಡೆಯುವ ಕಲಹಗಳ ಪಂಚಾಯಿತಿ ತೀರ್ಮಾನಗಳಿಗೆ ಮಾತ್ರ ಸುತಾರಾಂ ಒಪ್ಪುವುದಿಲ್ಲ. ಮನುಷ್ಯನಿಗೆ ಹಣದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ಗಳಿಸಿದ ಸಂಪತ್ತು ಧರ್ಮ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳುವ ವಿವೇಚನೆ ಮೈಗೂಡಿಸಿಕೊಳ್ಳಬೇಕು’ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಅವರು ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಉದ್ಘಾಟಿಸಿದರು. ಸಭೆಯಲ್ಲಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ, ದೊಡ್ಡೇರಿ ಜಿ.ವಿಶ್ವನಾಥ್, ಎಚ್.ಎ.ಗದ್ದಿಗೇಶ್, ಟಿ.ಗೋಪನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಶಿಕ್ಷಕ ಕರಿಬಸಪ್ಪ ಕವಿತಾ ಮಾತನಾಡಿದರು.
ಅರಕೆರೆ ಎ.ಬಿ.ಹನುಮಂತಪ್ಪ, ಡಿ.ಎಸ್.ಪ್ರದೀಪ್ಗೌಡ, ಕೋಡಿಕೊಪ್ಪ ಶಿವಪ್ಪ, ಮಾವಿನಕೋಟಿ ಮಂಜಪ್ಪ, ಎಂ.ನಾಗರಾಜ, ಪಿ.ಮಂಜಪ್ಪ, ಎಸ್.ಎಂ.ಚಂದ್ರಪ್ಪ, ಕೆ.ಆರ್.ಮಲ್ಲೇಶಪ್ಪ, ಎಂ.ಪಿ.ಷಡಾಕ್ಷರಿ, ಎಂ.ಗಣೇಶ್ ಎಂ.ಈ.ನವೀನ, ಜಿ.ಎಚ್.ಮಲ್ಲಿಕಶರ್ಜುನ, ಕೆ.ಎಸ್.ರಾಜಪ್ಪ, ಜಿ.ಪಿ.ರಮೇಶ್ಪಟೇಲ್, ಎಚ್.ಆರ್.ಮಲ್ಲೇಶಪ್ಪ, ಎಸ್.ಎಂ.ರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.