ದಾವಣಗೆರೆ: 2023-24ನೇ ಸಾಲಿನ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ಸರದಿ ಅನ್ವಯ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.
ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 15ರ ವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26ರಿಂದ ನವೆಂಬರ್ 17ರ ವರೆಗೆ ಒಟ್ಟು 23 ದಿನ ನೀರು ಹರಿಸಲಾಗುವುದು.
ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರು ಹರಿಸಲಾಗಿದ್ದು, ಅಕ್ಟೋಬರ್ 1ರ ವರೆಗೆ ಒಟ್ಟು 15 ದಿನ ನೀರು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12ರಿಂದ 26ರ ವರೆಗೆ 15 ದಿನ ಹಾಗೂ ನವೆಂಬರ್ 6ರಿಂದ 17ರ ವರೆಗೆ 12 ದಿನ ನೀರು ಹರಿಸಲಾಗುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮೂರ್ಖರನ್ನಾಗಿಸುವ ಕುತಂತ್ರ’
‘ಸರದಿ ಅನ್ವಯ ನೀರು ಹರಿಸಲಾಗುವುದು ಎಂದು ತಿಳಿಸಿರುವುದು ಆನ್ ಆ್ಯಂಡ್ ಆಫ್ ಪದ್ಧತಿಯಾಗಿದೆ. ಹೊಸದಾಗಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರವಾಗಿದೆ’ ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್ ಟೀಕಿಸಿದ್ದಾರೆ.
‘ಕಾಂಗ್ರೆಸ್ ಸರ್ಕಾರ ತಾನು ನೀಡಿದ ಆದೇಶದಂತೆ ನಿರಂತರ 100 ದಿನ ನೀರು ಹರಿಸಬೇಕು. ರೈತರ ಒಕ್ಕೂಟ ಕಳೆದ 10 ದಿನಗಳಿಂದ ಹೋರಾಟ ಮಾಡುತ್ತಿದೆ. ರೈತರ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನ್ನಣೆ ನೀಡಿಲ್ಲ. ಇದು ಅವರ ರೈತ ವಿರೋಧಿ ಧೋರಣೆಯಾಗಿದೆ’ ಎಂದು ಅವರು ಆರೋಪಿಸಿದ್ದಾರೆ.