ದಾವಣಗೆರೆ: ನಗರದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಒಳಚರಂಡಿ ಸ್ವಚ್ಛತೆಗೆ ಚರಂಡಿ ಇಳಿಸಲಾಗಿದೆ. ದೇಹದ ಸ್ವಲ್ಪ ಭಾಗ ಚರಂಡಿಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಕಾರ್ಮಿಕ ಚರಂಡಿ ಸ್ವಚ್ಛತೆಗೆ ಇಳಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸಕ್ಕಿಂಗ್ ಯಂತ್ರದ ಮೂಲಕ ಚರಂಡಿ ಸ್ಚಚ್ಛಗೊಳಿಸದೆ ಕಾರ್ಮಿಕನನ್ನು ಸ್ವಚ್ಛತೆಗೆ ಇಳಿಸಿದ ಕಲ್ಯಾಣ ಮಂಟಪದ ಮಾಲೀಕರು, ವ್ಯವಸ್ಥಾಪಕರ ವಿರುದ್ಧ ಮ್ಯಾನುಯಲ್ ಸ್ಕಾವೆಂಜರ್ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮ್ಯಾನುಯಲ್ ಸ್ಕಾವೆಂಜರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಹುಚ್ಚೆಂಗಪ್ಪ ಅವರು, ಒಳಚರಂಡಿ ಸ್ವಚ್ಛತೆಗೆ ಯಂತ್ರದ ಬದಲು ಕಾರ್ಮಿಕರನ್ನು ಬಳಸಿದ್ದು ತಪ್ಪು. ಕಲ್ಯಾಣ ಮಂಟಪದ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತ ಪ್ರತಿಕ್ರಿಯೆಗೆ ಮಹಾನಗರ ಪಾಲಿಕೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
‘ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಸ್ಥಳಕ್ಕೆ ಬಂದು ಸುಮ್ಮನೆ ಹೋಗಿದ್ದಾರೆ. ಅವರಿಗೆ ಕಾಯ್ದೆ ಬಗ್ಗೆ ಅರಿವಿಲ್ಲ. ಕಲ್ಯಾಣ ಮಂಟಪದ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.