ಹರಪನಹಳ್ಳಿ: ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೀತಾಬಾಯಿ ನಾಗ್ಯಾನಾಯ್ಕ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಿಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ಪಿ. ಲಿಂಬ್ಯಾನಾಯ್ಕ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಲಿಂಬ್ಯಾನಾಯ್ಕ ಅವರನ್ನು ಹೊರತುಪಡಿಸಿದರೆ, ಕೊನೆಗಳಿಗೆಯವರೆಗೂ ಬೇರಾರು ಉಮೇದುವಾರಿಕೆ ಸಲ್ಲಿಸದ ಪರಿಣಾಮ, ಲಿಂಬ್ಯಾನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ, ಸಹಕಾರಿ ಸಂಘಗಳ ನಿಬಂಧಕ ಎನ್. ಸುರೇಶ್ ಘೋಷಿಸಿದರು.
ಒಟ್ಟು 14ಸದಸ್ಯ ಬಲವುಳ್ಳ ಪಂಚಾಯ್ತಿಯಲ್ಲಿ 11ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪದಚ್ಯುತ ಅಧ್ಯಕ್ಷೆ ಸೀತಾಬಾಯಿ ಸೇರಿದಂತೆ 3ಮಂದಿ ಸದಸ್ಯರು ಗೈರುಹಾಜರಾಗಿದ್ದರು.
ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ನೂತನ ಅಧ್ಯಕ್ಷ ಲಿಂಬ್ಯಾನಾಯ್ಕ, ಸಮರ್ಪಕ ಕುಡಿಯುವ ನೀರು ಪೂರೈಕೆ, ಶೈಕ್ಷಣಿಕ ಪ್ರಗತಿ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದರು.