ದಾವಣಗೆರೆ: ಎರಡು ಬಾರಿ ಸಂಸತ್ ಸದಸ್ಯರಾಗಿರುವ ಜಿ.ಎಂ.ಸಿದ್ದೇಶ್ವರ ಅವರು, ಅಶೋಕ ಚಿತ್ರಮಂದಿರದ ಬಳಿ ರಸ್ತೆ ಸಮಸ್ಯೆ ಪರಿಹರಿಸಲು ಆಗಿಲ್ಲ. ಡಿಸಿಎಂ ಟೌನ್ಶಿಪ್ ಹಾಗೂ ಶಿರಮಗೊಂಡನಹಳ್ಳಿಯ ಕೆಳಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ ಎಂದು ಎಂದು ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರಾಗಲೀ, ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರವೀಂದ್ರನಾಥ್ ಅವರಾಗಲೀ ನನ್ನ 21ನೇ ವಾರ್ಡ್ಗೆ ಒಂದೇ ಒಂದು ರೂಪಾಯಿ ಅನುದಾನವನ್ನೂ ನೀಡಿಲ್ಲ. ಜನರ ತೆರಿಗೆ ಹಣ, 13ನೇ ಹಣಕಾಸು ಆಯೋಗದ ಹಣ ಬಳಸಿ ಅಭಿವೃದ್ಧಿ ಮಾಡಿದ್ದೇನೆ. ಸಿದ್ದೇಶ್ವರ ಹಾಗೂ ರವೀಂದ್ರನಾಥ್ ಅವರು ನನ್ನ ವಾರ್ಡ್ಗೆ ₨ 3.50 ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗೆ ಕೊಟ್ಟಿರುವುದನ್ನು ರುಜುವಾತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಸವಾಲೆಸೆದರು. ಅಧಿಕಾರಿಗಳನ್ನು ಹೆದರಿಸಿ ಅವರ ಭಾವಚಿತ್ರ ಹಾಕಿಸಿಕೊಳ್ಳುವ ಕೆಲಸವನ್ನು ಸಂಸತ್ ಸದಸ್ಯರು ಮಾಡಿದ್ದಾರೆ ಎಂದು ಆರೋಪಿಸಿದರು.
ನಾಲ್ಕು ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ ಎಂದು ಬಿಜೆಪಿಯವರು ಬೀಗುವ ಅಗತ್ಯವಿಲ್ಲ. ದಕ್ಷಿಣದಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ ಎಂದರು.
ಪಿ.ಬಿ.ರಸ್ತೆ ವಿಸ್ತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರು ಕ್ರಮ ವಹಿಸಿದ್ದಾರೆ. ಇದರಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
‘ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ₨ 400 ಕೋಟಿ ಹಗರಣ ನಡೆದಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಲೋಕಾಯುಕ್ತಕ್ಕೆ ವಹಿಸುವ ಕೆಲಸ ಮೊದಲು ಮಾಡುತ್ತೇವೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ, ಜೋಗಪ್ಪರ ಬಸಪ್ಪ, ಅಜ್ಜಪ್ಪ ಪವಾರ್, ರೇವಣಪ್ಪ, ಪಂಚಪ್ಪ, ಶ್ರೀಕಾಂತ್ ಬರಗೇರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.