ದಾವಣಗೆರೆ: ದಾವಣಗೆರೆಯನ್ನು ಎರಡನೇ ರಾಜಧಾನಿ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚೆ ನಡೆಸಲು ಸಮಯ ನಿಗದಿ ಮಾಡಿಕೊಡುವಂತೆ ಆಗ್ರಹಿಸಿ, ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಸದಸ್ಯರು ಭಾನುವಾರ ತೋಟಗಾರಿಕೆ ಹಾಗೂ ಎಂಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪಗೆ ಮನವಿ ಸಲ್ಲಿಸಿದರು.
2ನೇ ರಾಜಧಾನಿ ಸಂಬಂಧ ಈಗಾಗಲೇ ಹಲವು ಬಾರಿ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಎರಡು ಬಾರಿ ಐಎಎಸ್ ಅಧಿಕಾರಿ ಹೀರಾನಾಯ್ಕ ಮೂಲಕ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಸವಿಸ್ತಾರವಾಗಿ ಚರ್ಚೆ ನಡೆಸಬೇಕು. ದಿನಾಂಕ ಹಾಗೂ ಸಮಯ ನಿಗದಿಗೊಳಿಸಿದರೆ ಹೋರಾಟ ಸಮಿತಿಯ ನಿಯೋಗ ಅವರನ್ನು ಭೇಟಿ ಮಾಡಿ ಚರ್ಚಿಸುತ್ತದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ತಿಳಿಸಿದ್ದಾರೆ.