ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | 2ಎ ಮೀಸಲಾತಿ: ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆ

Published 14 ಅಕ್ಟೋಬರ್ 2023, 5:10 IST
Last Updated 14 ಅಕ್ಟೋಬರ್ 2023, 5:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 5 ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ನೆರವೇರಿಸಿ ಹೋರಾಟ ಮಾಡಿದ್ದೇವೆ. ಉಳಿದ 25 ಜಿಲ್ಲೆಗಳಲ್ಲೂ ಈ ಹೋರಾಟ ಕೈಗೊಳ್ಳುವ ಮುನ್ನ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಇಲ್ಲಿನ ಗಬ್ಬೂರು ಕ್ರಾಸ್‌ ಬಳಿ ‍ಶುಕ್ರವಾರ ಪುಣೆ–ಬೆಂಗಳೂರು ಹೆದ್ದಾರಿ ತಡೆದು, ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರತಿಭಟನೆ ಮಾಡಿದ ಅವರು, ‘ಮೂರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳಿ ಇಷ್ಟಲಿಂಗ ಪೂಜೆಮಾಡಿ, ಪ್ರತಿಭಟಿಸುತ್ತೇವೆ’ ಎಂದರು.

‘ಕಳೆದ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2ಡಿ ಮೀಸಲಾತಿ ನೀಡಿದಾಗ ನಾವು ಸ್ವಾಗತಿಸಿದ್ದೆವು. ಆದರೆ, ಅದರ ಮರುದಿನವೇ ಚುನಾವಣಾ ನೀತಿ ಸಂಹಿತೆ ಜಾರಿಯಾದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ಸ್ಪಂದನೆ ಸಿಗುತ್ತಿಲ್ಲ’ ಎಂದರು.

ಬಿಜೆಪಿ ಅಥವಾ ಕಾಂಗ್ರೆಸ್‌ ಸರ್ಕಾರವೇ ಇರಲಿ ಮೀಸಲಾತಿ ಸಿಗುವವರೆಗೆ ನಾವು ಹೋರಾಟ ಬಿಡಲ್ಲ. ಇನ್ನಷ್ಟು ತೀವ್ರಗೊಳಿಸುತ್ತೇವೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ, ಕೂಡಲಸಂಗಮ

‘ನಮ್ಮ ಸಮಾಜದ 11 ಮಂದಿ ಕಾಂಗ್ರೆಸ್‌ ಶಾಸಕರು ಮತ್ತು ಇಬ್ಬರು ಸಚಿವರಿದ್ದಾರೆ. ನಮಗೆ ಮೀಸಲಾತಿ ಅಗತ್ಯವಿದ್ದು, ಇದಕ್ಕೆ ಶಾಸಕರು ಕೂಡ ಧ್ವನಿಯೆತ್ತಬೇಕು’ ಎಂದರು.

ಮಾಜಿ ಶಾಸಕ ಪಿ.ಸಿ.ಸಿದ್ದನಗೌಡರ ಮಾತನಾಡಿ, ‘ಸಮಾಜ ಗಟ್ಟಿಯಾಗಿದ್ದರೆ ಪ್ರಧಾನಿ ಮೋದಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಬಾಗಿಲಿಗೆ ಬರುತ್ತಾರೆ’ ಎಂದರು. 

ಪಂಚಮಸಾಲಿ ಹೋರಾಟ ಸಮಿತಿಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ, ದೀಪಾ ನಾಗರಾಜ ಅಕ್ಕಿ, ಜಿ.ಜಿ. ದ್ಯಾಮನಗೌಡರ, ರಾಜಶೇಖರ ಮೆಣಸಿನಕಾಯಿ ಮಾತನಾಡಿದರು. ಎಸ್‌.ಐ. ಚಿಕ್ಕನಗೌಡ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT