ಹುಬ್ಬಳ್ಳಿ: ನರೇಶ ಗಾಂಧಿ ಅವರ ಅರ್ಧಶತಕದ (70 ರನ್) ನೆರವಿನಿಂದ ಬಯೋಟಾಪ್ ಲೈಫ್ ಸೇವಿಯರ್ಸ್ ತಂಡವು ಟೆಲಿವಿಷನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎವಿಆರ್ ಟಸ್ಕರ್ಸ್ ವಿರುದ್ಧ 9 ವಿಕೆಟ್ ಜಯ ಸಾಧಿಸಿತು.
ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎವಿಆರ್ ಟಸ್ಕರ್ಸ್ ನೀಡಿದ 101 ರನ್ಗಳ ಗುರಿಯನ್ನು ಬಯೋಟಾಪ್ ತಂಡವು 9.1 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಮುಟ್ಟಿತು.
32 ಎಸೆತಗಳನ್ನು ಎದುರುಸಿದ ನರೇಶ್ 12 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಇವರಿಗೆ ಬೆಂಬಲ ನೀಡಿದ ಸುಚನ್ ಶೆಟ್ಟಿ 21 ಎಸೆತಗಳಲ್ಲಿ 26 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟಸ್ಕರ್ಸ್ ತಂಡ ರೇಣುಕ್ ಅವರ ಉತ್ತಮ ಬೌಲಿಂಗ್ ದಾಳಿಗೆ (30ಕ್ಕೆ 4) ತತ್ತರಿಸಿತು. ತಂಡವು ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು.
ಅರವಿಂದ ರೆಡ್ಡಿ (32), ಅಜಯ ಸತ್ಯನಾರಯಣ (30) ಮಾತ್ರ ಉತ್ತಮ ಪ್ರದರ್ಶನ ನೀಡಿದರು.
ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ದಿ ಬುಲ್ ಸ್ಕ್ವಾಡ್ ತಂಡವು ಜಿಎಲ್ಆರ್ ವಾರಿಯರ್ಸ್ ವಿರುದ್ಧ 8 ವಿಕೆಟ್ ಜಯ ಸಾಧಿಸಿತು. ಗೋಲ್ಡನ್ ಈಗಲ್ಸ್ ತಂಡವು ಅಶ್ವಸೂರ್ಯ ರೈಡರ್ಸ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿತು. ರಾಸು ವಾರಿಯರ್ಸ್ ತಂಡವು ಎವಿಆರ್ ಟಸ್ಕರ್ಸ್ ವಿರುದ್ಧ 44 ರನ್ಗಳಿಂದ ಜಯಗಳಿಸಿತು.
ಎನ್1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೂರ್ನಿ ಆಯೋಜಿಸಲಾಗಿದ್ದು, ಮಾರ್ಚ್ 3ರವರೆಗೆ ನಡೆಯಲಿದೆ. 10 ತಂಡಗಳು ಭಾಗವಹಿಸಿವೆ.