ರಾಣೆಬೆನ್ನೂರು: ಇಲ್ಲಿನ ಸಿದ್ದಾರೂಢ ನಗರದ ಸಿದ್ದಾರೂಢ ಮಠದಲ್ಲಿ ಫೆ.12 ರಿಂದ ಫೆ.14 ವರೆಗೆ 24ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಮಹಾಸಭೆ ಹಾಗೂ ಸಿದ್ದಾರೂಢರ 10ನೇ ವರ್ಷದ ಮಹಾರಥೋತ್ಸವ ನಡೆಯಲಿದೆ.
ಫೆ.12ರಂದು ಬೆಳಿಗ್ಗೆ ಸಿದ್ದಾರೂಢ ಮೂರ್ತಿಗೆ ಅಭಿಷೇಕ ಹಾಗೂ ಹೂವುಗಳ ಅಲಂಕಾರ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ 8.30ಕ್ಕೆ ಮಠದ ಮುಖ್ಯ ಮಹಾದ್ವಾರದ ಉದ್ಘಾಟನೆ ನಡೆಯಲಿದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಿದ್ದಾರೂಢಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ ಆವರಣದಲ್ಲಿ ಮೂರು ದಿನಗಳ ಕಾಲ ವೇದಾಂತ ಪರಿಷತ್ ನಡೆಯುತ್ತದೆ. ಹುಬ್ಬಳ್ಳಿಯ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಜಡೆಸಿದ್ದೇಶ್ವರಮಠದ ರಾಮಾನಂದ ಭಾರತಿ ಸ್ವಾಮೀಜಿ ನೇತೃತ್ವ ವಹಿಸುವರು.
ಮೊದಲ ದಿನ ಫೆ.12ರಂದು ʻಮಾಯೆ ಕರ್ಮದ ಬಾಧೆ ಕಾಯಕದ ಬಾಧೆ ವಾಯು ವಿಷಯೇಂದ್ರಿಯದ ಬಾಧೆ ಶಂಕರʼ ಎಂಬ ವಿಷಯದ ಕುರಿತು, ಫೆ.13ರಂದು ʻನರಜನ್ಮದಿಂದಹದೊಳು ಮಿಗಿಲುಂಟೆ ಕರಣವಿಜಯದಿಂದೆ ಕಲಿತನಮುಂಟೆʼ ಎಂಬ ವಿಷಯ, ಫೆ.14 ರಂದು ʻನವವಿಧ ಭಕ್ತಿʼಯ ಕುರಿತು ವೇದಾಂತ ಸಭೆ ನಡೆಯಲಿದೆ.
ಸಂಜೆ 4.30ಕ್ಕೆ ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯುತ್ತದೆ ಎಂದು ಸಿದ್ದಾರೂಢಮಠದ ಅಧ್ಯಕ್ಷ ಮಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.