ಧಾರವಾಡ: ‘ಕರ್ನಾಟಕವು ಸಾಂಸ್ಕೃತಿಕವಾಗಿ ವಿಶ್ವಮಾನ್ಯತೆ ಪಡೆದ ರಾಜ್ಯ. ಸಹಸ್ರಾರು ವರ್ಷಗಳಿಂದ ಸ್ವಂತಿಕೆ ಉಳಿಸಿಕೊಂಡು ಬಂದಿರುವುದು ವೈಭವದ ಪರಾಕಾಷ್ಠತೆಗೆ ಸಾಕ್ಷಿಯಾಗಿದೆ’ ಎಂದು ಪ್ರೊ.ಗಿರೀಶ ದೇಸೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ರಾಜ್ಯೋತ್ಸವದ ಅಂಗವಾಗಿ ಈಚೆಗೆ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ-50’ ಅಂಗವಾಗಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಉಜ್ವಲವಾದದ್ದು. ನಾಡಿನಲ್ಲಿ ಅನೇಕ ವೈವಿಧ್ಯತೆಗಳಿದ್ದರೂ ಕನ್ನಡಿಗರು ಬಹುಕಾಲದಿಂದ ಉದಾರತೆ, ಕಲಿತನ, ತ್ಯಾಗ, ಧರ್ಮ ಸಮನ್ವಯ, ಆದರ್ಶ ಗುಣ ಸ್ವಭಾವ ಬೆಳೆಸಿಕೊಂಡು ಬಂದಿರುವುದು ಶಾಸನಗಳಿಂದ ತಿಳಿದು ಬರುತ್ತದೆ’ ಎಂದರು.
‘ಕನ್ನಡ ಸಾಹಿತ್ಯ ಉಜ್ವಲವಾಗಿದೆ. ವಚನ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದೆ. ಶರಣರು ಜನವಾಣಿಯನ್ನು ದೇವವಾಣಿಯನ್ನಾಗಿ ಮಾಡಿದರು’ ಎಂದು ಹೇಳಿದರು.
ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಸಂಘದವರು ನಾಡು, ನುಡಿಯ ಜಾಗೃತಿಗೀತೆಗಳನ್ನು ಪ್ರಸ್ತುತಪಡಿಸಿದರು. ಎಲ್.ಇ.ಎ ಪದವಿಪೂರ್ವ ಕಾಲೇಜಿನ ರಾಜೇಂದ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿ. ಜಿ. ಬೆಟಗೇರಿ, ಗುರು ಹಿರೇಮಠ, ವೀರಣ್ಣ ಒಡ್ಡೀನ ಇದ್ದರು.