(ಮುಮ್ಮಿಗಟ್ಟಿ) ಉಪ್ಪಿನಬೆಟಗೇರಿ: ‘ಯುವಕರನ್ನು ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಸಶಕ್ತಗೊಳಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಶ್ಲಾಘನೀಯ’ ಎಂದು ನಿವೃತ್ತ ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಹೇಳಿದರು.
ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಶಿಕ್ಷಣ ವರ್ಗವು ರಾಷ್ಟ್ರಭಕ್ತಿಯ ಜತೆಗೆ ಸಾಹಸ ಮತ್ತು ಶೌರ್ಯದ ಇತಿಹಾಸ ತಿಳಿಸುತ್ತದೆ. ಸೈನಿಕರು ಪ್ರಕೃತಿ ವಿಕೋಪ, ಯುದ್ಧ, ಗಲಭೆ ಹೀಗೆ ಅನೇಕ ಕಷ್ಟಕರ ಸಮಯದಲ್ಲಿ ರಾಷ್ಟ್ರ ರಕ್ಷಣೆಗಾಗಿ ಹೋರಾಡುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕರಿಗೆ ಪರೋಪಕಾರ ಮತ್ತು ರಾಷ್ಟ್ರ ಮೊದಲು ಎಂಬ ಭಾವ ಮೈಗೂಡಿಸಿಕೊಳ್ಳಲು ಹೇಳಲಾಗುತ್ತದೆ’ ಎಂದು ಹೇಳಿದರು.
ಆರ್ಎಸ್ಎಸ್ ಸಹ ಪ್ರಾಂತ ಕಾರ್ಯವಾಹ ಕಿರಣ ಗುಡ್ಡದಕೇರಿ ಮಾತನಾಡಿ, ‘ಸಮಾಜದಲ್ಲಿ ಬೇರೂರಿದ ಭೇದ–ಭಾವ, ಮೇಲು–ಕೀಳು ತೊಡೆದುಹಾಕಲು ಸಂಘ ಶ್ರಮಿಸುತ್ತಿದೆ. ಮಾತೃಭಾಷೆ ಕಲಿಕೆ, ಸ್ವದೇಸಿ ವಸ್ತುಗಳ ಬಳಕೆ, ಪರಿಸರ ಸಂರಕ್ಷಣೆ, ಪ್ಲ್ಯಾಸ್ಟಿಕ್ ಮುಕ್ತ ಸಮಾಜದ ಕಡೆಗೆ ಗಮನ ಹರಿಸುವ ಅವಶ್ಯವಿದೆ’ ಎಂದರು.
‘ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ದೊರೆಯಬೇಕು. ಸ್ವಯಂ ಸೇವಕರು ನಿತ್ಯ ಶಾಖೆಗೆ ಹೋಗವುದರಿಂದ ಸಂಘ ಮತ್ತು ಸಮಾಜಕ್ಕೆ ಶಕ್ತಿ ಲಭಿಸುತ್ತದೆ’ ಎಂದು ಹೇಳಿದರು.
ಈ ವೇಳೆ ಪಥಸಂಚಲನ, ಶಾರೀರಿಕ ಪ್ರದರ್ಶನ, ದಂಡ ವ್ಯಾಯಾಮ, ದೇಸಿ ಆಟಗಳು ನಡೆದವು. ವರ್ಗಾಧಿಕಾರಿ ವೇದವ್ಯಾಸ ದೇಶಪಾಂಡೆ, ಸು. ರಾಮಣ್ಣ, ವಿ.ನಾಗರಾಜ, ರಾಘವೇಂದ್ರ ಕಾಗವಾಡ, ನರೇಂದ್ರ, ಶಿಬಿರಾರ್ಥಿಗಳು, ಗ್ರಾಮಸ್ಥರು ಇದ್ದರು.