ಹುಬ್ಬಳ್ಳಿ: ‘ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಅವರನ್ನು ಗುರುತಿಸಿ, ಅವಕಾಶ ನೀಡುವ ಕೆಲಸ ಆಗಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನವಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ದಿನಗಳಲ್ಲಿ ಕನ್ನಡ ಸಿನಿಮಾಗಳ ಮಾರುಕಟ್ಟೆ ವ್ಯಾಪ್ತಿ ವಿಸ್ತಾರವಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯ ಸಿನಿಮಾಗಳು ಉತ್ತಮ ಗಳಿಕೆಯ ಜತೆಗೆ ಹೆಸರು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ.ಚಲನಚಿತ್ರೋತ್ಸವ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ. ಕನ್ನಡ ಸಿನಿಮಾಗಳನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿ ಸಬೇಕು’ ಎಂದು ತಿಳಿಸಿದರು.
ನಟ ಸುನಿಲ ಪುರಾಣಿಕ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿ–ಧಾರವಾಡದ ಹಲವು ಕಲಾವಿದರು ಚಲನಚಿತ್ರ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಹೆಸರು ಮಾಡಿದ್ದಾರೆ. ಇದು ಈ ನೆಲಕ್ಕಿರುವ ಶಕ್ತಿ ಎಂದರು.
ಮುಂದಿನ ದಿನಗಳಲ್ಲಿ ಚಲನಚಿತ್ರೋತ್ಸವದ ಜತೆಗೆ ಸೌಂಡ್ ಮತ್ತು ಲೈಟಿಂಗ್, ಗ್ರಾಫಿಕ್ಸ್, ಎಡಿಟಿಂಗ್, ಮೇಕಪ್ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತರಬೇತಿ ನೀಡಲು ಮಾಸ್ಟರ್ ಕ್ಲಾಸ್ಗಳನ್ನು ಆಯೋಜಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಟಿ ಭವ್ಯಾ ಮಾತನಾಡಿದರು.ನವಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಂ.ವಿ. ಮಮ್ಮಿಗಟ್ಟಿ , ಉದ್ಯಮಿ ವಿಜಯ ಸೈಗಲ್, ಕಲ್ಮೇಶ ಹಾವೇರಿಪೇಟ್, ಸುವರ್ಣ ಲತಾ ಇದ್ದರು.