ಲಕ್ಷ್ಮೇಶ್ವರ: ಬಸ್ನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬಾಲೆಹೊಸೂರು ಗ್ರಾಮದ ನಿವಾಸಿ ರೇಣವ್ವ ಮಾಡಳ್ಳಿ (48) ಎಂದು ಗುರುತಿಸಲಾಗಿದೆ. ಬಾಲೆಹೊಸೂರಿನಿಂದ ಸೂರಣಗಿ ಗ್ರಾಮಕ್ಕೆ ಅವರು ಬರುತ್ತಿದ್ದರು.
ಸೂರಣಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿಯುವಾಗ ಮಹಿಳೆ ಆಯತಪ್ಪಿ ಬಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರನ್ನು ಆಸ್ಪತ್ತೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದು ಆತ್ಮಹತ್ಯೆ
ಲಕ್ಷ್ಮೇಶ್ವರ: ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಗ್ರಾಮದ ಪ್ರಭಣ್ಣ ಡವಳಗಿ (50) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ. ಗುರುವಾರ ಈತನ ಶವ ಗ್ರಾಮದ ಹಳ್ಳದ ಹತ್ತಿರದ ಬಾವಿಯೊಂದರಲ್ಲಿ ಕಂಡು ಬಂದಿತು. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.