ಧಾರವಾಡ: ‘ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಆದರೆ, ಅರ್ಜಿ ಹಾಕಲು ಈ ಬಾರಿ ಬಿ.ಎಡ್ನ್ನು ಕಡ್ಡಾಯಗೊಳಿಸಿರುವುದು ಬಹುಪಾಲು ಆಕಾಂಕ್ಷಿಗಳಿಗೆ ನಿರಾಸೆಯನ್ನುಂಟು ಮಾಡಿದೆ’ ಎಂದು ಎಐಡಿವೈಓ ಸಂಘಟನೆ ರಾಜ್ಯ ಉಪಾಧ್ಯಕ್ಷ ಎನ್.ರವಿ ಅವರನ್ನೊಳಗೊಂಡ ನಿಯೋಗವೊಂದು ಸೋಮವಾರ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಸಲ್ಲಿಸಿತು.
‘ಮೂರು ವರ್ಷಗಳ ನಂತರ ನಡೆಯುತ್ತಿರುವ ಬಹು ನಿರೀಕ್ಷಿತ 1,130 ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಹಾಕಲು ಬಿ.ಎಡ್ ಕಡ್ಡಾಯಗೊಳಿಸಿರುವುದರಿಂದ ಬಹುಪಾಲು ಆಕಾಂಕ್ಷಿಗಳನ್ನು ಸ್ಪರ್ಧೆಯಿಂದ ಹೊರಗಿಟ್ಟಂತಾಗಿದೆ.
ಅಲ್ಲದೆ, ಬಿ.ಕಾಂ ಮತ್ತು ಎಂ.ಕಾಂ ಮುಗಿಸಿರುವವರು ಬಿ.ಎಡ್ ಪದವಿಯನ್ನು ಪಡೆಯುವುದಾದರೂ ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇದರ ಜೊತೆಗೆ ಪರೀಕ್ಷಾ ಶುಲ್ಕವನ್ನು ₨ 2,500ಕ್ಕೆ ಹೆಚ್ಚಳ ಮಾಡಿರುವುದು ಬಡ, ನಿರುದ್ಯೋಗಿ ಅರ್ಜಿದಾರರಿಗೆ ತೀವ್ರ ಹೊರೆಯಾಗಿದೆ.
ಇದಲ್ಲದೇ, ಈ ಹಿಂದೆ ಶೇ. ೫೦ರಷ್ಟು ಅಂಕಗಳನ್ನು ಪಡೆದರೆ ಅರ್ಜಿ ಹಾಕಲು ಅರ್ಹತೆ ದೊರೆಯುತ್ತಿದ್ದುದನ್ನು, ಈ ಬಾರಿ ಶೇ. ೫೫ಕ್ಕೆ ಏರಿಸಿರುವ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಅರ್ಜಿ ಶುಲ್ಕವನ್ನು ಎಲ್ಲರ ಕೈಗೆಟುಕುವ ಮಟ್ಟಕ್ಕೆ ಇಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ನಿಯಮಗಳನ್ನು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.