ಗದಗ: ‘12ನೇ ಶತಮಾನದಲ್ಲಿ ನೂರಾರು ವಚನಗಳನ್ನು ರಚಿಸಿದ ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಅವರ ಬದುಕಿನ ಆದರ್ಶ ಮಹಿಳೆಯರಿಗೆ ಮಾದರಿ’ ಎಂದು ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.
ಇಲ್ಲಿ ನಡೆದ ಅಕ್ಕನ ಬಳಗದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ‘ಅಕ್ಕಮಹಾದೇವಿಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣ ಎಲ್ಲರಿಗೂ ಅಣ್ಣನೆನಿಸಿದರೆ, ಅಕ್ಕಮಹಾದೇವಿ ಅವರು ಅಕ್ಕಳಾದಳು’ ಎಂದರು.
‘ಮನುಷ್ಯ ದೇವರಲ್ಲಿ ನೇರವಾಗಿ ಸುಖವನ್ನು ಕೇಳುತ್ತಾನೆ. ಇದರಿಂದ ನಿಜವಾದ ಸಂತೋಷ ಸಿಗಲಾರದು. ಕಷ್ಟದಿಂದ ಅನಾನೂಕಲತೆ ಎದುರಾದಾಗ ಮನುಷ್ಯನಿಗೆ ಸುಖದ ಮಹತ್ವ ಅರಿವಾಗುತ್ತದೆ. ಅಕ್ಕನ ಬಳಗವು ಅಕ್ಕಮಹಾದೇವಿಯ ಮೌಲ್ಯಯುತವಾದ ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದರು.