ಡಂಬಳ: ಡಂಬಳ ಹೋಬಳಿ ಹಳ್ಳಿಗುಡಿ ಸಮೀಪ ಬಿತ್ತನೆ ಬೀಜ ತರುವ ವೇಳೆ ಬೈಕ್ ಮತ್ತು ಕೊಪ್ಪಳದಿಂದ ಗದಗ ಕಡೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ನಡುವೆ ಸೋಮವಾರ ಅಪಘಾತ ಸಂಭವಿಸಿ, ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ರೈತರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹೋಬಳಿ ಪೇಠಾಲೂರ ಗ್ರಾಮದ ರೈತ ಮಾರುತೆಪ್ಪ ತಿಮ್ಮಣ್ಣ ಹ್ಯಾಟಿ (45), ಹಳ್ಳಿಗುಡಿ ಗ್ರಾಮದ ರೈತ ಪರಸಪ್ಪ ದೇವಪ್ಪ ಗದಗಿನ (50) ಮೃತರು ಎಂದು ಗುರುತಿಸಲಾಗಿದೆ.
ರೈತರು ಡಂಬಳ ಗ್ರಾಮದ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ತೆಗೆದುಕೊಂಡು ವಾಪಸ್ ಹಳ್ಳಿಗುಡಿ ಗ್ರಾಮದ ಹತ್ತಿರವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಮುಂಡರಗಿ ಸಿಪಿಐ ಮಂಜುನಾಥ ಕುಸಗಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.