ಗದಗ: ಮುಂಗಾರು ಮಳೆ ಪೂರ್ವ ಸಿದ್ಧತೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಶನಿವಾರ ಸ್ವಚ್ಛತಾ ಕಾಮಗಾರಿ ವೀಕ್ಷಿಸಿ, ಸಲಹೆ ಸೂಚನೆ ನೀಡಿದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿನ ಚರಂಡಿಗಳು ಮತ್ತು ರಾಜಕಾಲುವೆಗಳಲ್ಲಿನ ಹೂಳು ಮತ್ತು ಮುಳ್ಳು ಕಂಟಿಗಳನ್ನು ತೆಗೆಯಬೇಕು. ಹಿಟಾಚಿ ಮತ್ತು ಜೆಸಿಬಿ ವಾಹನಗಳ ಮುಖಾಂತರ ಶೀಘ್ರವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಕಸ, ಮುಸುರೆ ಹಾಗೂ ಕಟ್ಟಡದ ತ್ಯಾಜ್ಯಗಳನ್ನು ಚರಂಡಿಗಳಿಗೆ ಎಸೆಯದಂತೆ ಜಾಗೃತಿ ಮೂಡಿಸಬೇಕು. ಚರಂಡಿಯಿಂದ ತೆಗೆದ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಗದಗ-ಬೆಟಗೇರಿ ನಗರದಲ್ಲಿ ಸಂಚರಿಸಿ ಮಾನ್ವಿ ರಾಜನಾಲಾ, ಹೊಸ ಕೋರ್ಟ್ ಹತ್ತಿರದ ರಾಜನಾಲಾ, ಬೆಟಗೇರಿಯ ಜರ್ಮನ್ ಆಸ್ಪತ್ರೆ ಬಳಿ ಇರುವ ರಾಜನಾಲಾ ಮತ್ತು ಹುಯಿಲಗೋಳ ಸೇತುವೆ ಸಮೀಪದ ರಾಜನಾಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಂಡಿವಡ್ಡರ, ಪರಿಸರ ಎಂಜಿನಿಯರ್ ಆನಂದ ಬದಿ, ನಗರಸಭೆ ಆರೋಗ್ಯ ನಿರೀಕ್ಷಕರು, ದಫೇದಾರರು ಇದ್ದರು.