ನರೇಗಲ್: ಪಟ್ಟಣದ ಗಜೇಂದ್ರಗಡ ರಸ್ತೆಯ ಬದಿಯ ಹಿತ್ತಲದಲ್ಲಿ ಹಾಕಲಾಗಿದ್ದ ಆರು ಬಣಿವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಗುರುವಾರ ಜರುಗಿದೆ.
ಸ್ಥಳೀಯರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಸಹ ಅಪಾರ ಪ್ರಮಾಣದ ಹೊಟ್ಟು, ಮೇವು ಭಸ್ಮವಾಗಿದೆ. ಮಾಹಿತಿ ತಿಳಿದು ರೋಣ ದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದರು ಹಾಗೂ ಇತರೆ ಕಡೆ ಬೆಂಕಿ ಹಬ್ಬುವುದನ್ನು ತಪ್ಪಿಸಿದರು.
ಈ ಆರು ಬಣವೆಗಳಲ್ಲಿ ರೈತ ಮಲ್ಲಪ್ಪ ಗೋಡಿಯವರ 2 ಟ್ರ್ಯಾಕ್ಟರ್ ಜೋಳದ ಮೇವು, 2 ಟ್ರ್ಯಾಕ್ಟರ್ನಷ್ಟು ಕಡಲೆ ಹೊಟ್ಟು ಮತ್ತು 2 ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಇತ್ತು ಅಂದಾಜು ₹ 60 ಸಾವಿರ ಹಾನಿಯಾಗಿದೆ. ಇನ್ನೊಬ್ಬ ರೈತ ಬಸಪ್ಪ ನೀಲಪ್ಪ ಗೋಡಿಯವರ 2 ಟ್ರಾಕ್ಟರ್ ಜೋಳದ ಮೇವು, 2 ಟ್ರಾಕ್ಟರ್ ಕಡಲೆ ಹೊಟ್ಟು ಮತ್ತು 5 ಟ್ರಾಕ್ಟರ್ ಶೇಂಗಾ ಹೊಟ್ಟು ಹಾಕಲಾಗಿತ್ತು ಅಂದಾಜು ₹ 1 ಲಕ್ಷ ಹಾನಿಯಾಗಿದೆ.
ಹನುಮಪ್ಪ ನಿಂಗಪ್ಪ ಗೋಡಿ ಇವರಿಗೆ ಸೇರಿದ 2 ಟ್ರಾಕ್ಟರ್ ಜೋಳದ ಮೇವು, 2 ಟ್ರಾಕ್ಟರ್ ಕಡಲೆ ಹೊಟ್ಟು ಮತ್ತು 4 ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಇತ್ತು. ಅಂದಾಜು ₹ 90 ಸಾವಿರ ಹಾನಿಯಾಗಿದೆ ಎಂದು ರೈತರು ಹೇಳಿಕೊಂಡರು.
ಈ ವೇಳೆ ಅಗ್ನಿ ಶಾಮಕ ದಳದ ಆರ್.ಎಸ್.ನಕ್ಕರಗೊಂದಿ, ಸಂತೋಷ ತೋಟದ, ನಿಂಗನಗೌಡ ಅಳಗವಾಡಿ, ಹನುಮಂತ ಕಟ್ಟಿಮನಿ, ರಾಜೇಶ ಮಲ್ಲಾಪುರ ಇದ್ದರು.