ನಮಗೆ ಕಾನೂನಿನ ಬಾಗಿಲು ಇನ್ನೂ ಮುಚ್ಚಿಲ್ಲ
ಚಂದ್ರು ತಡಸದ ‘ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ನಗರಸಭೆ ಸದಸ್ಯತ್ವ ಅನರ್ಹತೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪೀಠ ವಜಾಗೊಳಿಸಿದೆ. ಆದರೆ ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಪಕ್ಷದ ಹಿರಿಯರು ಕಾನೂನು ತಜ್ಞರ ಜತೆಗೆ ಚರ್ಚಿಸಿ ಹೋರಾಟ ಮುಂದುವರಿಸುತ್ತೇವೆ. ಕಾನೂನಿನ ಬಾಗಿಲು ನಮಗೆ ಇನ್ನೂ ಮುಚ್ಚಿಲ್ಲ’ ಎಂದು ನಗರಸಭೆ ಸದಸ್ಯ ಚಂದ್ರು ತಡಸದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ತೀರ್ಪು ಬಂದರೆ ಏನು ಮಾಡಬೇಕು ಎಂದು ಮೊದಲೇ ಯೋಚಿಸಿದ್ದೇವು. ಅದರಂತೆ ಹೈಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಮತ್ತೇ ಅರ್ಜಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು. ‘ಹೈಕೋರ್ಟ್ ಪೀಠ ಮಂಗಳವಾರ ನೀಡಿದ ಆದೇಶದ ಪ್ರಕಾರ ಹಿಂದೆ ನಡೆದಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಊರ್ಜಿತ ಆಗುವುದಿಲ್ಲ. ಹಾಗಾಗಿ ಕೊನೆ ಹಂತದವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.