ನರಗುಂದ: ಸಣ್ಣ ಗುತ್ತಿಗೆದಾರರು ವಿವಿಧ ಇಲಾಖೆಯಲ್ಲಿ ಸ್ವಂತ ಹಣ ಹಾಕಿ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಇಲ್ಲಿಯವರೆಗೂ ಕಾಮಗಾರಿ ಮಾಡಿದ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಸಂಕಷ್ಟದಲ್ಲಿರುವ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಾಲ್ಲೂಕಿನ ಸಣ್ಣ ಗುತ್ತಿಗೆದಾರರು ಖಾಸಗಿ ಹೋಟೆಲ್ನಲ್ಲಿ ಗುರುವಾರ ಆತ್ಮಹತ್ಯೆ ಅಣಕು ಪ್ರದರ್ಶನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಗುತ್ತಿಗೆದಾರರ ಮುಖಂಡ ಪರಪ್ಪ ಸಾಹುಕಾರ, ನಾವು ಜೀವನ ನಡೆಸದಂತಹ ಪರಿಸ್ಥಿತಿಯಲ್ಲಿದ್ದೇವೆ. 2023-23ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯಡಿ ₹ 10 ಕೋಟಿ, ನೀರಾವರಿ ನಿಗಮದಲ್ಲಿ ₹10 ಕೋಟಿಯನ್ನು ಸ್ವಂತವಾಗಿ ಭರಿಸಿ ಕಾಮಗಾರಿ ಮುಗಿಸಿದ್ದೇವೆ. ಅದರ ಹಣ ಬಿಡುಗಡೆಯಾಗಿಲ್ಲ. ಹೀಗಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬಾರದು? ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಲ್ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ, ಸರ್ಕಾರಕ್ಕೆ ಹಲವಾರು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರ ಬೇಗ ಎಚ್ಚೆತ್ತುಕೊಂಡು ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಣ್ಣ ಗುತ್ತಿಗೆದಾರರಾದ ಸುರೇಶ ಹುಡೇದಮನಿ, ಬಸನಗೌಡ ಪಾಟೀಲ, ರಾಜು ಪಾಟೀಲ, ಭೀಮಶಿ ಯಾವಗಲ್, ಶಶಿ ನೆಗಳೂರ, ಗೋಪಾಲ ಹೊರಕೇರಿ, ಹನಮಂತಗೌಡ ಪಾಟೀಲ, ಈರನಗೌಡ ಬೆಳ್ಳೇರಿ, ರಮೇಶ ಕಾಳೆ, ಪ್ರವೀಣ ಯಲಿಗಾರ, ಶಿವು ಚಲವಾದಿ, ಇತರರು ಇದ್ದರು.