ಲಕ್ಷ್ಮೇಶ್ವರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ತಾಯಿ ದಿನದ ಕೂಲಿಗೆ ಹೋಗದಿದ್ದರೆ ಒಲೆ ಉರಿಯದು. ಯಾವುದೇ ಸೌಲಭ್ಯ ಇಲ್ಲದ ತಗಡಿನ ಮನೆ. ಇಂಥ ಮನೆಯಲ್ಲಿ ದನಕರುಗಳ ಚಾಕರಿ ಮಾಡುತ್ತಲೇ ಓದಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾಳೆ ಲಕ್ಷ್ಮೇಶ್ವರ ತಾಲ್ಲೂಕು ಆದರಹಳ್ಳಿ ಗ್ರಾಮದ ರವೀನಾ ಸೋಮಪ್ಪ ಲಮಾಣಿ.
ರವೀನಾ ಮೊದಲಿನಿಂದಲೂ ಓದಿನಲ್ಲಿ ಜಾಣೆ. ಒಂದನೇ ತರಗತಿಯಿಂದ ಐದನೇ ತರಗತಿಯನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿರುವ ಈಕೆ 6–8ನೇ ತರಗತಿಯನ್ನು ಮುಂಡರಗಿ ತಾಲ್ಲೂಕು ಡಂಬಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತು 9 ಮತ್ತು 10ನೇ ತರಗತಿಯನ್ನು ತಾಲ್ಲೂಕಿನ ಪುಟಗಾಂವ್ಬಡ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತಿದ್ದಾಳೆ.
ಧಾರವಾಡದ ಕೆಇ ಬೋರ್ಡ್ ಸಂಸ್ಥೆಯಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಓದಿದ ರವೀನಾ 595 ಅಂಕ ಪಡೆದಿದ್ದಾರೆ. ಮುಂದೆ ಯುಪಿಎಸ್ಸಿ ಓದುವ ಬಯಕೆ ಅವರದ್ದು.
ಕನ್ನಡ-99, ಹಿಂದಿ-98, ಇತಿಹಾಸ-100, ಭೂಗೋಳ-100, ರಾಜ್ಯಶಾಸ್ತ್ರ 100, ಶಿಕ್ಷಣ-98 ಅಂಕ ಪಡೆದಿದ್ದಾಳೆ.
ಸೋಮಪ್ಪ ಮತ್ತು ರೇಣವ್ವ ಲಮಾಣಿ ಅವರ ಮೂರನೇ ಮಗಳು ರವೀನಾ. ‘ನಮ್ಮ ಮಗಳು ಮದ್ಲಾಂಗಿದ್ಲೂ ಓದೋದರಾಗ ಭಾಳ ಹುಷಾರ ಇದ್ಲು. ನಮ್ಮ ಕೂಡ ಹೊಲಾ ಮನಿ ಕೆಲಸ ಮಾಡಕೋತ ಅಭ್ಯಾಸ ಮಾಡ್ಯಾಳ’ ಎಂದು ರವೀನಾ ಅವರ ತಂದೆ ಸೋಮಣ್ಣ ಲಮಾಣಿ ಹೇಳಿದರು.