ಮುಂಡರಗಿ: ‘ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ತಿಳಿಸಿದರು.
ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಗಳು ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವು ಮತ ಚಲಾಯಿಸುವುದರಿಂದ ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಪ್ರಜಾಪ್ರಭುತ್ವ ಗಟ್ಟಿಯಾದರೆ ಸಂವಿಧಾನದ ಆಶಯಗಳು ಈಡೇರುತ್ತವೆ’ ಎಂದು ತಿಳಿಸಿದರು.
ಮತದಾನ ಜಾಗೃತಿ ಜಾಥಾಕ್ಕೆ ಜಾಲನೆ ನೀಡಿದ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಮಾತನಾಡಿ, ‘ದೇಶದ ಸದೃಢ ನಾಳೆಗಳನ್ನು ರೂಪಿಸುವುದಕ್ಕಾಗಿ ನಾವೆಲ್ಲ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕಿದೆ. ಮೇ 7ರಂದು ಜರುಗಲಿರುವ ಮತದಾನವನ್ನು ನಮ್ಮ ಮನೆಯ ಹಬ್ಬದಂತೆ ಆಚರಿಸಬೇಕು’ ಎಂದು ತಿಳಿಸಿದರು.
‘ಮತದಾರರು ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ತಮಗೆ ಇಷ್ಟವಾಗುವ ಅಭ್ಯರ್ಥಿಗಳಿಗೆ ನಿರ್ಭಯವಾಗಿ ಮತ ನೀಡಬೇಕು’ ಎಂದು ಸಲಹೆ ನೀಡಿದರು.
ಎಲ್ಲ ಸರ್ಕಾರಿ ನೌಕರರು ಮತದಾನ ಹಾಗೂ ಚುನಾವಣಾ ಪರ ಘೋಷಣೆಗಳನ್ನು ಕೂಗುತ್ತ ಪಟ್ಟಣದ ಅಂಬಾ ಭವಾನಿ ನಗರ, ಕೇಂದ್ರ ಬಸ್ ನಿಲ್ದಾಣ, ಮುಖ್ಯ ಮಾರುಕಟ್ಟೆ, ಗಾಂಧಿ ವೃತ್ತ, ಜಾಗೃತ ವೃತ್ತ, ಕೊಪ್ಪಳ ವೃತ್ತ ಮಾರ್ಗವಾಗಿ ಬೈಕ್ ಜಾಥಾ ನಡೆಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಬಿಇಒ ಎಚ್.ಎಂ.ಫಡ್ನೇಶ, ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಶಿವಕುಮಾರ ಸಜ್ಜನರ, ವಿಶ್ವನಾಥ ಉಳ್ಳಾಗಡ್ಡಿ, ನಾಗರಾಜ ಅಥಣಿ, ಶಂಕರ ಸರ್ವದೆ, ಎನ್.ಎಂ.ಕುಕನೂರ, ಬಿ.ಬಿ.ಬೆನಕನವಾರಿ, ಕಾಶೀನಾಥ ಸಿರಬಡಗಿ, ಎ.ಡಿ.ಬಂಡಿ ಇದ್ದರು.