ನರಗುಂದ: ತಾಲ್ಲೂಕಿನ ಗುರ್ಲಕಟ್ಟಿಯ ಅಂಗನ ವಾಡಿಗೆ ಶಾಸಕ ಸಿ.ಸಿ ಪಾಟೀಲ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಗೆ ಬಂದ ಮಕ್ಕಳು 25 ಮಾತ್ರ. ಆದರೆ ಅಂಗನವಾಡಿ ಕಾರ್ಯಕರ್ತೆ ದಾಖಲಾತಿಯಲ್ಲಿ 41 ಮಕ್ಕಳು ಹಾಜರಿದ್ದಾರೆಂದು ನಮೂದಿಸಿದ್ದರಿಂದ ಶಾಸಕ ಸಿ.ಸಿ.ಪಾಟೀಲ ಕೋಪಗೊಂಡು ಕಾರ್ಯಕರ್ತೆ ದಾಕ್ಷಾಯಣಿ ನೀಲವೇಣಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಇವರಿಗೆ ನೋಟಿಸ್ ಜಾರಿ ಮಾಡುವಂತೆ ಸ್ಥಳದಲ್ಲಿದ್ದ ಶಿಶು ಅಭಿವೃದ್ಧಿ ಅಧಿಕಾರಿ ಟಿ.ಜೆ. ಶಂಕರಮೂರ್ತಿಗೆ ಸೂಚಿಸಿದರು.
ಅಲ್ಲಿಯ ಅವ್ಯವಸ್ಥೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ತಾವೇ ಆಸಕ್ತಿ ವಹಿಸಿ ಹಾಜರಿದ್ದ ಮಕ್ಕಳ ಸಂಖ್ಯೆಯನ್ನು ಎಣಿಸಿದಾಗ ಹಾಜರಾತಿ ಬಗ್ಗೆ ಅನುಮಾನ ವ್ಯಕ್ತವಾಗಿ ಹಾಜರಾತಿಯ ದಾಖಲಾತಿ ಪರಿಶೀಲಿಸಿದಾಗ ಕಾರ್ಯಕರ್ತೆ ಮಾಡಿರುವ ತಪ್ಪು ತಿಳಿದು ಬಂತು.
ನಂತರ ಕಾರ್ಯಕರ್ತೆಯರಿಂದ ಅಡುಗೆ ಬಗ್ಗೆ ಮಾಹಿತಿ ಪಡೆದು ಸರಿಯಾಗಿ ಕಾರ್ಯನಿ ರ್ವಹಿಸು ವಂತೆ ಸೂಚಿಸಿದರು. ಸ್ವಚ್ಚತೆ ಹಾಗೂ ಅಡಿಗೆ ಸಾಮಗ್ರಿಗಳನ್ನು ಪರಿಶೀಲಿಸಿ ಅಡುಗೆ ರುಚಿಯನ್ನು ತಾವೇ ಸವಿದರು.
ಮೇಲ್ವಿಚಾರಕಿ ಉಷಾರವರಿಂದ ಮಕ್ಕಳಿಗೆ ವಿತರಿಸುವ ಊಟ ಹಾಗೂ ಉಪಹಾರದ ಬಗ್ಗೆ ಮಾಹಿತಿ ಪಡೆದರು.
ಕಾಲಕಾಲಕ್ಕೆ ಅಂಗನವಾಡಿ ಸರಿ ಯಾಗಿ ಪರಿಶೀಲನೆ ಮಾಡುವಂತೆ ಮೇಲ್ವಿಚಾರಕರಿಗೆ ಹಾಗೂ ಸಿಡಿಪಿಒಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷ ವಿ.ಎನ್.ಕೊಳ್ಳಿಯವರ ಹಾಜರಿದ್ದರು.