ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆ ಮಾಹಿತಿ ಪಡೆಯಲು ಸಲಹೆ

Last Updated 8 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ಮುಂಡರಗಿ: `ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕಾಲಕಾಲಕ್ಕೆ ನೀಡುವ ಸಲಹೆ, ಮಾರ್ಗದರ್ಶನಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯುವ ರೈತರು ಸಂಪೂರ್ಣವಾಗಿ ವಿಫಲರಾಗಿದ್ದು, ಕೇವಲ ಇಲಾಖೆಗಳು ನೀಡುವ ಸಹಾಯ ಧನ, ಸಬ್ಸಿಡಿ, ಕೃಷಿ ಸಲಕರಣೆಗಳನ್ನು ಪಡೆದುಕೊಳ್ಳಲು ಮಾತ್ರ ಅವರು ಚಿಂತನೆ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವಿನಾಳ ವಿಷಾದ ವ್ಯಕ್ತಪಡಿಸಿದರು.

 ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ತೋಟಗಾರಿಕೆ ಬೆಳೆಗಾರರ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

 `ಉತ್ತಮ ಮಣ್ಣು, ನೀರು, ಹವಾಮಾನ, ಮಾನವ ಸಂಪನ್ಮೂಲಗಳನ್ನು ಹೊಂದಿರುವ ನಾವು ನೀರಿಕ್ಷಿತ ಪ್ರಮಾಣದ ಆಹಾರ ಉತ್ಪಾದನೆ ಮಾಡುವಲ್ಲಿ ವಿಫಲವಾಗಿದ್ದೇವೆ. ಯುವ ಜನತೆಯಲ್ಲಿ ಕೃಷಿ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ  ಪ್ರಗತಿಪರ ರೈತರ ಜಮೀನುಗಳಿಗೆ, ತೋಟಗಳಿಗೆ ಅವರನ್ನು ಕರೆದುಕೊಂಡು ಹೋಗಿ ಕೃಷಿ ಪರಿಚಯ, ಪ್ರಾತ್ಯಕ್ಷಿಕೆ ಮಾಡಿಸಬೇಕಾಗಿದೆ~ ಎಂದು ರು ಸಲಹೆ ನೀಡಿದರು.

 `ನಿಯಮಿತವಾಗಿ ಶಿವಾನುಭವ, ಸತ್ಸಂಗ, ಕೀರ್ತನೆ, ಪುರಾಣಗಳನ್ನು ಏರ್ಪಡಿಸುವ ಬದಲಾಗಿ ಗ್ರಾಮೀಣ ಭಾಗಗಳ ರೈತರು ವಾರಕೊಂದು ಬಾರಿ ಕೃಷಿ ಚಿಂತನ ಗೋಷ್ಠಿಗಳನ್ನು ಏರ್ಪಡಿಸಬೇಕೆಂದು ಸಲಹೆ ನೀಡಿದರು. 

ಸರಕಾರದ ನೆರವಿಲ್ಲದೆ ಪಂಜಾಬ್ ಹಾಗೂ ಗುಜರಾತ್ ರಾಜ್ಯಗಳಲ್ಲಿ ರೈತರು ಈಗಾಗಲೇ ಇಂತಹ ಪ್ರಯೋಗಗಳಿಂದ ಯಶಸ್ಸು ಕಂಡಿದ್ದು, ನಮ್ಮ ರೈತರು ಅದರತ್ತ ಮನಸ್ಸು ಮಾಡಬೇಕು~ ಎಂದು ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಹೇಳಿದರು.

ಯುವ ರೈತರು ಪ್ರಾಮಾಣಿಕತೆಯಿಂದ ದುಡಿದು ಆರ್ಥಿಕ ಸ್ವಾವಲಂಬನೆ ಸಾಧಿಸ ಬಹುದು~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಉಪಾಧ್ಯಕ್ಷ ಪಿ.ಎಂ.ಪಾಟೀಲ ತಿಳಿಸಿದರು.

ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಸಿ.ಕೆ.ಮೇದಪ್ಪ ಮಾತನಾಡಿ `ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಚಿವರ ನಿರ್ದೇಶನದಂತೆ ರೈತರನ್ನು ವಿವಿಧ ಜಿಲ್ಲೆಗಳ ಪ್ರಗತಿಪರ ರೈತರ ಜಮೀನು ಮತ್ತು ತೋಟಗಳಿಗೆ ಕರೆದುಕೊಂಡು ಹೋಗಲಾಗುವುದು~ ಎಂದು ತಿಳಿದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ, ತಾ.ಪಂ.ಸದಸ್ಯ ನಿಂಗಬಸಪ್ಪ ಪ್ಯಾಟಿ, ರೈತ ಮುಖಂಡರಾದ ದೇವಪ್ಪ ಇಟಗಿ, ಆಶೋಕ ನಾಡಗೌಡ, ಶಿವಾನಂದ ಇಟಗಿ ಹಾಜರಿದ್ದರು. ತಾಲ್ಲೂಕು ತೋಟಗಾರಿಕೆ ಇಲಾಖೆಯ ಸಹನಿರ್ದೇಶಕ ಸುರೇಶ ಕುಂಬಾರ  ನಿರೂಪಿಸಿದರು.

ನೂತನ ಪದಾಧಿಕಾರಿಗಳು

ಮುಂಡರಗಿ ರೋಟರಿ ಶಿಕ್ಷಣ ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು. ಪಟ್ಟಣದ ಗಣ್ಯ ವರ್ತಕ ಕೊಟ್ರೇಶ ಅಂಗಡಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ತಾ.ಪಂ.ಉಪಾಧ್ಯಕ್ಷ ಪಿ.ಎಂ.ಪಾಟೀಲ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು.

 ರೇಖಾ ಅನ್ನದಾನಿ ಮೇಟಿ ಗೌರವ ಕಾರ್ಯದರ್ಶಿ, ವೈ.ಎಸ್.ನಾಡಗೌಡ ಖಜಾಂಚಿಯಾಗಿ ಆಯ್ಕೆಯಾದರು. ಎಸ್.ವಿ.ಲಿಂಬಿಕಾಯಿ, ಜೆ.ಎಸ್.ಅಳವಂಡಿ, ಡಾ.ಎ.ಎಂ.ಮೇಟಿ, ಎ.ಜಿ.ಕಡ್ಡಿ, ಶಾಂತಾ ಕಲ್ಲೂರ ಸದಸ್ಯರಾಗಿ ಆಯ್ಕೆಯಾದರು.

ಸರ್ವ ಪದಧಿಕಾರಿಗಳ ಸಹಾಯ ಸಹಕಾರದೊಂದಿಗೆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಕೊಟ್ರೇಶ ಅಂಗಡಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT