ಗದಗ: ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್. ಕೆ. ಪಾಟೀಲ ಭರವಸೆ ನೀಡಿದರು.
ನಗರದ ನೇಕಾರ ಕಾಲೋನಿಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಳಚರಂಡಿ, ಶೌಚಾಲಯ ಸೇರಿದಂತೆ ನೇಕಾರರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು.
ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ನೇಕಾರರಿಗೆ ಸಹಾಯ ಮಾಡಿದಷ್ಟು ಬೇರೆ ಯಾವ ಸರ್ಕಾರ ಮಾಡಿಲ್ಲ. ಕೆಎಚ್ಡಿಸಿ ನಷ್ಟದಲ್ಲಿ ಇದ್ದಾಗ ರೂ. 16 ಕೋಟಿ ನೆರವು ನೀಡಿರುವುದು, ಬೆಟಗೇರಿಯಲ್ಲಿ ಕೈಮಗ್ಗ ತಂತ್ರಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಿ ಜವಳಿ ನೀತಿ ರೂಪಿಸಿದ್ದು ಕಾಂಗ್ರೆಸ್ ಎಂದು ಪಾಟೀಲರು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಅಶೋಕ ಬಣ್ಣದ, ದೇವಪ್ಪ ಅಮರದ, ಚನ್ನಮಲ್ಲಪ್ಪ ಹೊಸಮನಿ, ಮಾಳೆಕೊಪ್ಪ ಯಶೋಧಾಬಾಯಿ ಮಾದಗುಂಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.