ಗದಗ: ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 80ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಖಾಸಗಿ ವಾಹನಗಳು ಮತ್ತು 108 ಅಂಬುಲೆನ್್ಸ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿ ಡಿ.ಬಿ.ಚನ್ನಶೆಟ್ಟಿ ತಿಳಿಸಿದರು.
ಒಂದರಿಂದ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡುವ ವೇಳೆ ಈ ಘಟನೆ ನಡೆದಿದ್ದು ಸಾಂಬರ್ನಲ್ಲಿ ಹಲ್ಲಿ ಬಿದ್ದಿರುವುದನ್ನು ವಿದ್ಯಾರ್ಥಿಯೊಬ್ಬ ಅಡುಗೆ ಸಿಬ್ಬಂದಿಗೆ ತೋರಿಸಿದಾಗ, ಗಾಬರಿಗೊಂಡ ಸಿಬ್ಬಂದಿ ತಕ್ಷಣವೇ ಸಾಂಬರ್ನಲ್ಲಿ ಬಿದ್ದಿದ್ದ ಹಲ್ಲಿಯನ್ನು ತೆಗೆದು ಬಿಸಾಡಿ, ಅದೊಂದು ಹುಳು ಎಂದು ಮಕ್ಕಳಿಗೆ ಹೇಳಿದ್ದಾರೆ. ಕೆಲ ಕ್ಷಣಗಳಲ್ಲಿ ಕೆಲ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡರೆ ಮತ್ತೆ ಕೆಲವರು ಹೊಟ್ಟೆ ನೋವು ಎಂದು ಚೀರಾಡತೊಡಗಿದರು.
ಗ್ರಾಮದಲ್ಲಿ ಈ ಸುದ್ದಿ ಹರಡುತ್ತಿದ್ದಂತೆಯೇ ಪಾಲಕರು ಶಾಲೆಯತ್ತ ಧಾವಿಸಿದರು. ಆಸ್ಪತ್ರೆ ಒಳಗೆ ಪ್ರವೇಶಿಸುವ ಸಂಬಂಧಿಸಿದಂತೆ ಮಕ್ಕಳ ಪಾಲಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಆಯಿತು.
ವಿಷಯ ತಿಳಿದು ಆಸ್ಪತ್ರೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಮಕ್ಕಳು ಆರೋಗ್ಯವಾಗಿದ್ದು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಅವರಿಗೆ ಸೂಚಿಸಲಾಗುವುದು ಎಂದರು.
ಜಿ.ಪಂ ಸದಸ್ಯ ಎಂ.ಎಸ್. ದೊಡ್ಡ ಗೌಡ್ರ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗ ರಾಜ್, ಡಾ. ಡಿ.ಬಿ. ಚನ್ನಶೆಟ್ಟಿ, ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಪಾಟೀಲ ಆಸ್ಪತ್ರೆಗ ಭೇಟಿ ನೀಡಿದರು.