ಲಕ್ಷ್ಮೇಶ್ವರ: ಬಾಲೆಹೊಸೂರು ಪ್ರಕರಣದಲ್ಲಿ ಅಮಾಯಕರಾಗಿರುವ ದಿಂಗಾಲೇಶ್ವರ ಶ್ರೀಗಳನ್ನು ಬಂಧಿಸಬಾರದು ಎಂದು ಆಗ್ರಹಿಸಿ ಸೋಮವಾರ ವಿವಿಧ ಸಂಘಟನೆಗಳು ನಡೆಸಿದ ಲಕ್ಷ್ಮೇಶ್ವರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬಂದ್ ಅಂಗವಾಗಿ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಮಹಾಕವಿ ಪಂಪ ವರ್ತುಲದಿಂದ ಆರಂಭವಾದ ಮೆರವಣಿಗೆ ಬಸ್ತಿಬಣ, ವಿದ್ಯಾರಣ್ಯ ವರ್ತುಲ, ಹಾವಳಿ ಹನುಮಪ್ಪನ ದೇವಸ್ಥಾನ, ಸೋಮೇಶ್ವರ ಪಾದಗಟ್ಟಿ, ಪುರಸಭೆ, ಶಿಗ್ಲಿ ಕ್ರಾಸ್ ಮೂಲಕ ಸಂಚರಿಸಿ ಹೊಸ್ ನಿಲ್ದಾಣದ ಎದುರು ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಸೋಮಣ್ಣ ಬೆಟಗೇರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಚೆನ್ನಪ್ಪ ಜಗಲಿ, ಡಿಎಸ್ಎಸ್ ಮುಖಂಡರಾದ ಫಕ್ಕೀರೇಶ ಮ್ಯಾಟಣ್ಣವರ, ಹನಮಂತಪ್ಪ ನಂದೆಣ್ಣವರ, ನಾಗರಾಜ ಪೋತರಾಜ, ಶಂಕರ ಬಾಳಿಕಾಯಿ, ನೀಲಪ್ಪ ಶೆರಸೂರಿ, ಶಿಗ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ವೈ.ಹುನಗುಂದ ಮಾತನಾಡಿ ದಿಂಗಾಲೇಶ್ವರ ಸ್ವಾಮೀಜಿ ಸಾಮಾಜಿಕ ಕಾರ್ಯಕರ್ತರಾಗಿದ್ದು ಜನರಲ್ಲಿನ ದುಶ್ಚಟಗಳನ್ನು ಬಿಡಿಸುವ ಮೂಲಕ ನೂತನ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅಲ್ಲದೆ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂಥವರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರ ತೋಜೋವಧೆ ಮಾಡುವಲ್ಲಿ ಒಂದು ಗುಂಪು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.
ಇದು ಪೊಲೀಸ್ ಇಲಾಖೆಗೂ ಗೊತ್ತಿದೆ. ಆದರೂ ಅವರು ದುಷ್ಟರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಒಂದು ವೇಳೆ ಶ್ರೀಗಳನ್ನು ಬಂಧಿಸಿದರೆ ಜಾತಿ, ಮತ ಎನ್ನದೆ ಭಕ್ತರೆಲ್ಲ ಜೈಲ್ ಬರೋ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಬಸವರಾಜ ಅರಳಿ, ಕನ್ನಡ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಗೋಡಿ, ಪುರಸಭೆ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ ಮತ್ತಿತರರು
ಮಾತನಾಡಿದರು. ನಂತರ ಅಪರ ಜಿಲ್ಲಾಧಿಕಾರಿ ರಮೇಶ ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಆರ್.ಎಫ್. ಪುರಾಣಿಮಠ, ಮಂಜುನಾಥ ಮಾಗಡಿ, ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ಬಸವರಾಜ ಓದಾನವರ, ನಾಗಪ್ಪ ಓಂಕಾರಿ, ಅನಿಲ ಮುಳಗುಂದ, ಸೋಮಣ್ಣ ಸುತಾರ, ಕಿರಣ ನವಲೆ, ವಿರೂಪಾಕ್ಷಪ್ಪ ಆದಿ, ಪದ್ಮರಾಜ ಪಾಟೀಲ, ಬಸವರಾಜ ಹೊಗೆಸೊಪ್ಪಿನ, ಗಂಗಾಧರ ಮೆಣಿಸಿನಕಾಯಿ, ಬಸವರಾಜ ಮೆಣಸಿನಕಾಯಿ, ಮಹೇಶ ಮೇಟಿ, ಸತೀಶ ಮೆಕ್ಕಿ, ತಿಪ್ಪಣ್ಣ ಸಂಶಿ, ರಂಗು ಬದಿ, ಬಸವರಾಜ ಉಪನಾಳ, ಸುರೇಶ ನಂದೆಣ್ಣವರ, ಕರ್ನಾಟಕ ಜನಹಿತ ಅಭಿವೃದ್ಧಿಯ ಭಾಗ್ಯಶ್ರೀ ಲಮಾಣಿ, ಮೇರಿ ಬಂಡಿವಡ್ಡರ, ಶಾಂತವ್ವ ಅಡರಕಟ್ಟಿ, ಮುತ್ತಕ್ಕ ಬಂಡಿವಡ್ಡರ ಸೇರಿದಂತೆ ಹಾಜರಿದ್ದರು.
ಬಂದ್ನಲ್ಲಿ ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ಜನಹಿತ ವೇದಿಕೆ, ದಲಿತ ಸಂಘರ್ಷ ಸಮಿತಿ, ಶ್ರೀರಾಮ ಸೇನೆ, ಜೈ ಕರ್ನಾಟಕ ಸಂಘ, ನೇತಾಜಿ ಯುವಕ ಮಂಡಳ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಬಾಲೆಹೊಸೂರು, ಹಾವೇರಿ, ಗುತ್ತಲ, ಹಾನಗಲ್ಗಳಿಂದ ದಿಂಗಾಲೇಶ್ವರ ಶ್ರೀಗಳ ಭಕ್ತರು ಹಾಜರಿದ್ದರು.
ಪ್ರಯಾಣಿಕರ ಪರದಾಟ
ಬಂದ್ ಅಂಗವಾಗಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಒಂದು ಬಸ್ ಸಂಚರಿಸಲಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಇನ್ನು ಎರಡು ದಿನಗಳ ಹಿಂದೆಯೇ ಬಂದ್ ವಿಷಯ ಗೊತ್ತಿದ್ದರಿಂದ ಪಟ್ಟಣದ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಅಲ್ಲದೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಲನಚಿತ್ರ ಮಂದಿರಗಳ ಮಾಲೀಕರೂ ಚಿತ್ರ ಪ್ರದರ್ಶನ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ಎಪಿಎಂಸಿ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ವ್ಯವಹಾರ ನಡೆಯಲಿಲ್ಲ. ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.