ಶಿರಹಟ್ಟಿ: ತಾಲ್ಲೂಕಿನ ಕೊಕ್ಕರಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣ ಗೋಡೆ ಇಲ್ಲದಿರುವುದರಿಂದ ಮಕ್ಕಳು ಭಯದ ವಾತಾವರಣದಲ್ಲಿ ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಶಾಲೆಯ ಪಕ್ಕ ಬೃಹತ್ ಹಳ್ಳ ಹಾಗೂ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುರಿಂದ ಹಾವು ಚೇಳುಗಳು ಶಾಲೆ ಕೊಠಡಿ ಪ್ರವೇಶಿಸುತ್ತಿದ್ದು, ಮಕ್ಕಳಲ್ಲಿ ಭೀತಿಯನ್ನುಂಟು ಮಾಡಿದೆ.
ಶಾಲೆಗೆ ಭೂದಾನ ಮಾಡಿದ ವ್ಯಾಜ್ಯ ಕೋರ್ಟ್ ಮೆಟ್ಟಿಲನ್ನು ಹತ್ತಿರುವುದರಿಂದ ಇತ್ತ ಆವರಣ ಗೋಡೆ ನಿರ್ಮಾಣ ಮಾಡಲು ಆಗದೆ ಕನಿಷ್ಟ ಪಕ್ಷ ಬೇಲಿ ಹಾಕಲು ಆಗದ ಸ್ಥಿತಿ ಇದೆ. ಗ್ರಾಮದ ಹೊರವಲಯದಲ್ಲಿ ಇರುವ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7 ತರಗತಿವರೆಗೆ ಒಟ್ಟು 75 ವಿದ್ಯಾರ್ಥಿಗಳಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ಕೂಗಳತೆ ದೂರದಲ್ಲಿರುವ ಹಳ್ಳದ ಮೂಲಕ ಹಾವು–ಚೇಳುಗಳು ಶಾಲೆಯ ಆವರಣದೊಳಗೆ ಬರುತ್ತಿದ್ದು, ಮಕ್ಕಳು ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಒಂದೇ ತಿಂಗಳಲ್ಲಿ ಎರಡು ಬಾರಿ ಮಕ್ಕಳಿಗೆ ಹಾವು ಕಚ್ಚಿದ್ದೂ ಉಂಟು.
1990-–91ರಲ್ಲಿ ಗ್ರಾಮದ ಹಿರಿಯರು ಹಾಗೂ ಶಾಲಾ ಸಮಿತಿ ಸಮ್ಮುಖದಲ್ಲಿ ದೇವರೆಡ್ಡಿ ಬಸವರೆಡ್ಡಿ ಬೆನ್ನೂರ 20 ಗುಂಟೆ ಜಾಗೆಯನ್ನು ಶಾಲೆಗಾಗಿ ದಾನ ಮಾಡಿದ್ದರು. 10 ಗುಂಟೆ ಜಾಗದಲ್ಲಿ ಈಗಾಗಲೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಉಳಿದ 10 ಗುಂಟೆ ಜಾಗವನ್ನು ಆಟದ ಮೈದಾನಕ್ಕಾಗಿ ಮೀಸಲಿಡಲಾಗಿದೆ. ಭೂದಾನ ಮಾಡಿದ ವ್ಯಕ್ತಿ ನಿಧನ ಹೊಂದಿದ್ದರಿಂದ ಅವರ ಮಕ್ಕಳು ಭೂದಾನ ಮಾಡಿಲ್ಲವೆಂದು 12 ವರ್ಷಗಳ ತರುವಾಯ ನ್ಯಾಯಾಲಯದಲ್ಲಿ ಖಟ್ಲೆ ಹೂಡಿರುವುದು ಇದಕ್ಕೆಲ್ಲ ಕಾರಣವಾಗಿದೆ.
ಈಗಾಗಲೇ ಎರಡು ನ್ಯಾಯಾಲಯಗಳಲ್ಲಿ ಶಾಲೆಯ ಪರವಾಗಿ ತೀರ್ಪು ಬಂದಿದ್ದು, ಇದೀಗ ಮತ್ತೆ ಹೈಕೋರ್ಟ್ಗೆ ನಿವೇಶನ ಮಾಲೀಕರು ದಾವೆ ಹೂಡಿದ್ದಾರೆ. ಶಾಲೆಗೆ ಭೂಮಿ ದಾನ ಮಾಡಿದವರ ಜೊತೆಗೆ ಗ್ರಾಮಸ್ಥರು ನಡೆಸಿದ ಎಲ್ಲ ಸಂಧಾನಗಳು ವಿಫಲವಾಗಿವೆ.
ಶಾಲೆಗೆ ಅಂಟಿಕೊಂಡಿರುವ ವ್ಯಾಜ್ಯಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ವಸಂತಗೌಡ ಪಾಟೀಲ ಆಗ್ರಹಿಸಿದ್ದಾರೆ.