ವಿಜಯಪುರ: ‘ಹರಿಕಥಾಮೃತಸಾರ ಪಾರಾಯಣದಿಂದ ಮನಸ್ಸಿನ ಏಕಾಗ್ರತೆ ಸಾಧ್ಯ’ ಎಂದು ಮಧ್ವೇಶಾಚಾರ್ಯರು ಹೇಳಿದರು.
ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯ ದಾಸ ಸಾಹಿತ್ಯ ಪ್ರೊಜೆಕ್ಟ್ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ಹರಿಕಥಾಮೃತಸಾರ ಪಾರಾಯಣ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯ ಪರಮಾತ್ಮನನ್ನು ಒಲಿಸಿಕೊಳ್ಳುವ ಪ್ರಮುಖ ಸಾಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ವಿಜಯೀಂದ್ರ ನ್ಯಾಮಣ್ಣ ಮಾತನಾಡಿ, ‘ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ನಿತ್ಯ ಪಾರಾಯಣದಿಂದ ಮನಸ್ಸು ಶುದ್ಧಗೊಳ್ಳುತ್ತದೆ’ ಎಂದು ಹೇಳಿದರು.
ರಾಘವೇಂದ್ರ ಸ್ವಾಮಿ ಮಠದ ವಿಚಾರಣಾಕರ್ತ ಗೋಪಾಲ ನಾಯಕ ಮಾತನಾಡಿ, ‘ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿ ಆದೇಶದ ಮೇರೆಗೆ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ನವೆಂಬರ್ನಲ್ಲಿ ಜಿಲ್ಲೆಯ ಸಮಸ್ತ ಮಹಿಳಾ ಭಜನಾ ಮಂಡಳಿಗಳ ಸಮಾವೇಶವನ್ನು ಶ್ರೀಮಠದ ಮೇಲ್ಮಹಡಿಯಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಕೆ.ಬಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ವ್ಯಸ್ಥಾಪಕ ರವಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಗೋವಿಂದ ದೇಶಪಾಂಡೆ ಸ್ವಾಗತಿಸಿದರು. ಸಂಘಟಕರಾದ ಪವನ ಜೋಶಿ, ಬಿ.ಜೆ.ಜೋಶಿ ತೆಲಗಿ, ಕಲ್ಯಾಣರಾವ ಫಡ್ನಿಸ್, ಮಹಿಳಾ ಸಂಘಟನೆಯ ಅನಿತಾ ಪದಕಿ, ಅಕ್ಕಮ್ಮ ರಾವ್ ಇದ್ದರು.