ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇ ಗೌಡರ 87ನೇ ಹುಟ್ಟುಹಬ್ಬವನ್ನು ಜಿಲ್ಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ನಗರದ ದೇವಿಗೆರೆ ಬಳಿ ಇರುವ ನೀರು ಬಾಗಿಲು ಆಂಜನೇಯ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ನಂತರ ಆಜಾದ್ ರಸ್ತೆಯ ದರ್ಗಾದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ರಾಜೇಗೌಡ ಮಾತನಾಡಿ, ‘ ದೇವೇಗೌಡರ ನಾಯಕತ್ವವನ್ನು ದೇಶದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಗೌಡರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು’ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡ ಬಿ.ವಿ.ಕರೀಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಪಿ. ಸ್ವರೂಪ್, ಮುಖಂಡರಾದ ಅಣ್ಣಪ್ಪ ಶೆಟ್ಟಿ, ಗಿರೀಶ್, ಎಪಿಎಂಸಿ ನಿರ್ದೇಶಕ ಜಯರಾಂ, ಮಹಂತೇಶ್ ಹಾಜರಿದ್ದರು.
ನಂತರ ದೊಡ್ಡಗೌಡರ ಮೊಮ್ಮೊಗ ಪ್ರಜ್ವಲ್ ರೇವಣ್ಣ ಹಾಗೂ ಸೊಸೆ ಭವಾನಿ ರೇವಣ್ಣ ನಗರ ಕಾಮಧೇನು ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸಿ ಗೌಡರ ಹುಟ್ಟುಹಬ್ಬ ಆಚರಿಸಿದರು. ಆಶ್ರಮದ ವಾಸಿಗಳೊಂದಿಗೆ ಮಧ್ಯಾಹ್ನದ ಊಟ ಮಾಡಿ, ಆಶ್ರಮಕ್ಕೆ ₹ 1 ಲಕ್ಷ ದೇಣಿಗೆ ನೀಡಿದರು.
ಭವಾನಿ ಮಾತನಾಡಿ, ‘ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿ ಕಳೆದುಕೊಂಡೆ. ನನ್ನ ಪಾಲಿನ ತಂದೆ ದೇವೇಗೌಡರು’ ಎಂದು ಭಾವುಕರಾದರು.
‘ನನಗೆ ಎಲ್ಲರೂ ಇದ್ದಾರೆ. ಆದರೆ ತಂದೆ, ತಾಯಿ ಇಲ್ಲ. ಈ ರಾಜ್ಯಕ್ಕೆ ತಂದೆ ಸ್ಥಾನದಲ್ಲಿ ನಿಂತು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಪ್ರತಿ ವರ್ಷ ಆಶ್ರಮದಲ್ಲಿಯೇ ಗೌಡರ ಜನ್ಮ ದಿನ ಆಚರಿಸಲಾಗುವುದು’ ಎಂದು ಭರವಸೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕಾಮಧೇನು ವೃದ್ಧಾಶ್ರಮದ ವ್ಯವಸ್ಥಾಪಕ ಡಾ. ಗುರುರಾಜ್ ಹೆಬ್ಬಾರ್, ರಾಜಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಸ್ವರೂಪ್ , ಜೆಡಿಎಸ್ ವಕ್ತಾರ ಹೊಂಗೆರೆ ರಘು, ನಗರಸಭೆ ಸದಸ್ಯ ಗಿರೀಶ್, ಮುಖಂಡರಾದ ಕಮಲ್ ಕುಮಾರ್, ಬಾಬಿ, ಕಾಟಿಹಳ್ಳಿ ಚಂದ್ರು , ರಾಜಣ್ಣ ಇದ್ದರು.