ನಾನು ಮಕ್ಕಳ ಡಾಕ್ಟರ್, ವಾಸುದೇವ ಧನಂಜಯ್. ನಾನು ಮೊದಲು ಮಕ್ಕಳ ಸ್ನೇಹಿತ. ಆಮೇಲೆ ವೈದ್ಯ. ಮಕ್ಕಳ ಮನಸ್ಸನ್ನು ಗೆದ್ದು, ವಿಶ್ವಾಸ ಗಳಿಸಿ ಆಮೇಲೆ ಅವರ ಆರೋಗ್ಯ ಸಮಸ್ಯೆಯನ್ನು ತಿಳಿದುಕೊಂಡು ನಿಧಾನವಾಗಿ ತಪಾಸಣೆ ಮಾಡುವುದು ನನ್ನ ಕ್ರಮ. ಸಾಮಾನ್ಯವಾಗಿ ಒಬ್ಬ ವೈದ್ಯರು ದಿನಕ್ಕೆ ಎಷ್ಟು ರೋಗಿಗಳನ್ನು ನೋಡುತ್ತಾರೆ, ಎಷ್ಟು ಮಂದಿ ಅವರ ಕ್ಲಿನಿಕ್ಗೆ ಬರುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಅವರು ಒಳ್ಳೆಯ ಡಾಕ್ಟರ್ ಎಂದೋ, ಯಶಸ್ವಿ ಡಾಕ್ಟರ್ ಎಂದೋ ಜನರು ನಿರ್ಧರಿಸಿಬಿಡುತ್ತಾರೆ.
ಆದರೆ ನಾನು ನನ್ನ 37 ವರ್ಷಗಳ ಸೇವಾವಧಿಯಲ್ಲಿ ಎಂದೂ ಈ ರೀತಿಯ ಲೆಕ್ಕಾಚಾರ ಹಾಕಿಲ್ಲ. ಎಷ್ಟು ರೋಗಿಗಳನ್ನು ನೋಡಿದೆ, ಎಷ್ಟು ಸಂಪಾದಿಸಿದೆ ಎಂಬ ಅಂಕಿಸಂಖ್ಯೆ ನನಗೆ ಯಾವತ್ತೂ ಮುಖ್ಯವೆನಿಸಿಯೇ ಇಲ್ಲ.
ನನ್ನ ತಂದೆ ಡಾ.ಎಸ್.ಎನ್. ಧನಂಜಯ್ ಅವರು ಜೀವನದ ಮೌಲ್ಯಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಅವರು ರೋಗಿಗಳನ್ನು ನೋಡುತ್ತಿದ್ದ, ಗೌರವಿಸುತ್ತಿದ್ದ ರೀತಿ ನನಗೆ ಅನುಕರಣೀಯ ಅನ್ನಿಸಿತು.
‘ಯಾವತ್ತೂ ಹಣದ ಹಿಂದೆ ಹೋಗಬೇಡ, ಅಲ್ಪಾವಧಿಯಲ್ಲಿ ಹೆಚ್ಚು ಸಂಪಾದಿಸಿ ಶ್ರೀಮಂತನಾಗುತ್ತೇನೆ ಎಂಬ ದುರಾಸೆಯ ಬೆನ್ನು ಹತ್ತಬೇಡ, ಪ್ರಾಮಾಣಿಕವಾಗಿ ಕೆಲಸ ಮಾಡು. ಹಣ ತಾನಾಗಿಯೇ ನಿನ್ನ ಹಿಂದೆ ಬರುತ್ತದೆ’ ಎಂಬ ಸಿದ್ಧಾಂತವನ್ನು ಅವರೂ ಪಾಲಿಸಿದರು, ನನಗೂ ಹೇಳಿಕೊಟ್ಟರು. ಹಾಗಾಗಿ ರೋಗಿಗಳ ಯೋಗಕ್ಷೇಮವೇ ಮುಖ್ಯ ಎಂಬುದು ನನ್ನ ವೃತ್ತಿಮಂತ್ರವಾಯಿತು.
ನಾನು ಹುಟ್ಟಿ ಬೆಳೆದಿದ್ದು ದಾವಣಗೆರೆ ಹತ್ತಿರದ ಹರಿಹರದಲ್ಲಿ. ಆದರೆ ಶಾಲೆಗೆ ಸೇರುವವರೆಗೂ ಮೈಸೂರಿನಲ್ಲಿ ನಮ್ಮ ಅಜ್ಜನ ಮನೆಯಲ್ಲಿದ್ದೆ. ಅವರು ತೀರಿಕೊಂಡ ನಂತರ ನಾನು ಮತ್ತು ನನ್ನ ತಂಗಿ ಕಲ್ಪನಾ ಹರಿಹರಕ್ಕೇ ಹೋದೆವು. ನನ್ನ ತಂದೆ ಅಲ್ಲಿ ಎಂ.ಕೆ. ಕಿರ್ಲೋಸ್ಕರ್ ಕಂಪೆನಿಯಲ್ಲಿ ವೈದ್ಯಾಧಿಕಾರಿಯಾಗಿದ್ದರು. ಅವರು ಸುಮಾರು 20 ವರ್ಷ ಅದೇ ಕಂಪೆನಿಯಲ್ಲಿದ್ದುದರಿಂದ ನಮ್ಮಿಬ್ಬರ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಣವೂ ಕಿರ್ಲೋಸ್ಕರ್ ಶಾಲೆಯಲ್ಲಿಯೇ ಆಯಿತು. ಹರಿಹರ ಆಗ ಯಾವುದೇ ರೀತಿಯಿಂದ ಅಭಿವೃದ್ಧಿ ಹೊಂದಿರಲಿಲ್ಲ. ತಂದೆ ಸೈಕಲ್ನಲ್ಲಿಯೇ ಓಡಾಡುತ್ತಿದ್ದರು.
ನನ್ನ ಬಾಲ್ಯ ಸಮೃದ್ಧವಾಗಿತ್ತು. ಹರಿಹರದಲ್ಲಿ ಅಂತೂ ಪ್ರಕೃತಿಯ ನಡುವೆ ನಾವು ನಲಿದಾಡುತ್ತಿದ್ದೆವು. ಕಾಡುಪ್ರಾಣಿಗಳು, ಪಕ್ಷಿಗಳು, ಹಾವುಗಳನ್ನು ಶತ್ರುಗಳೆಂದು ಕಾಣುತ್ತಿರಲಿಲ್ಲ. ಹಾವುಗಳ ಕತೆಯಂತೂ ಮೈ ಜುಮ್ಮೆನಿಸುತ್ತದೆ. ತಂದೆ ಬೆಳಿಗ್ಗೆ ಗಡಿಬಿಡಿಯಿಂದ ಸೈಕಲ್ ಏರಿದರೆ, ಚಕ್ರ ಚಲಿಸುತ್ತಲೇ ಇರುತ್ತಿರಲಿಲ್ಲ. ಕೊನೆಗೆ ಚಕ್ರವನ್ನು ನೋಡಿದರೆ ಹಾವು ಸುತ್ತಿಕೊಂಡಿರುವುದು ಕಾಣುತ್ತಿತ್ತು. ಹಾವುಗಳು ಪ್ರತಿದಿನ ಕಣ್ಣಿಗೆ ಬೀಳುತ್ತಿದ್ದವು. ತಂದೆಗೆ ಹಕ್ಕಿಗಳ ವೀಕ್ಷಣೆಯ ಹವ್ಯಾಸವಿತ್ತು. ಅವರದ್ದೇ ಆದ ಒಂದು ತಂಡವೂ ಇತ್ತು. ನಾವೂ ಜೊತೆಯಲ್ಲಿ ಹೋಗುತ್ತಿದ್ದೆವು. ತುಂಗಭದ್ರಾ ನದಿಯಲ್ಲಿಯೇ ತಂದೆ ನನಗೆ ಈಜು ಕಲಿಸಿದ್ದು. ತಾಯಿ ಮೀರಾ ಧನಂಜಯ್ ತುಂಬಾ ಸಾತ್ವಿಕ ಸ್ವಭಾವದ ಮಹಿಳೆ. ನನ್ನ ಬಾಲ್ಯದ ದಿನಗಳನ್ನು ಈಗಲೂ ಮೆಲುಕು ಹಾಕುತ್ತಿರುತ್ತೇನೆ.
1959–60ರಲ್ಲಿ ತಂದೆ ಬೆಂಗಳೂರಿನ ಜಯನಗರ ಐದನೇ ಬ್ಲಾಕ್ನಲ್ಲಿ ಬಿಡಿಎ ಹರಾಜಿನಲ್ಲಿ ಒಂದು ಸೈಟು ಖರೀದಿಸಿದರು. ಆಗ ಬಿಡಿಎ ಹೆಸರು ಬೇರೇನೋ ಇತ್ತು. 50/90 ಅಳತೆಯ ಸೈಟಿಗೆ ಆಗ ಕೇವಲ ₹3,000 ಕೊಟ್ಟಿದ್ರು. 1963ರಲ್ಲಿ ಮನೆ ಕಟ್ಟಿಸಿದರು. ಮನೆ ಕಟ್ಟುವಾಗ ಬಾಡಿಗೆಗೆ ಕೊಡುವ ಉದ್ದೇಶವಿತ್ತು. ಆದರೆ ಅದೇ ಹೊತ್ತಿಗೆ ನಾನು ಎಸ್.ಎಸ್.ಎಲ್.ಸಿ.ಗೆ ಸೇರಿಕೊಳ್ಳಬೇಕಿತ್ತು. ಕಲ್ಪನಾ ನನಗಿಂತ ಐದು ವರ್ಷ ಸಣ್ಣವಳು. ನಮ್ಮ ಇಬ್ಬರ ಓದು ಬೆಂಗಳೂರಿನಲ್ಲಿ ಆಗಲಿ ಎಂಬ ಉದ್ದೇಶದಿಂದ ತಂದೆ ಹರಿಹರ ಬಿಟ್ಟು ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದರು. ಹಾಗಾಗಿ ಜಯನಗರದ ಮನೆಯನ್ನು ನಾವು ಸ್ವಂತಕ್ಕೆ ಬಳಸಿಕೊಂಡೆವು.
ನಾನು ಬೆಂಗಳೂರು ಹೈಸ್ಕೂಲ್ನಲ್ಲಿ ಹತ್ತನೇ ತರಗತಿಗೆ ಸೇರಿಕೊಂಡೆ. ಪಿಯುಸಿ ಓದಿದ್ದು ಐದನೇ ಬ್ಲಾಕ್ನಲ್ಲಿರುವ ವಿಜಯಾ ಕಾಲೇಜಿನಲ್ಲಿ. ನಾವು ಇಲ್ಲಿಗೆ ಬರುವಾಗ ನಾಲ್ಕನೇ ಬ್ಲಾಕ್ ಆಗ ತಾನೇ ಅಭಿವೃದ್ಧಿ ಹೊಂದುತ್ತಿತ್ತು. ಈಗ ಶಾಪಿಂಗ್ ಕಾಂಪ್ಲೆಕ್ಸ್ ಇರುವ ಜಾಗ ದೊಡ್ಡ ಮೈದಾನವಾಗಿತ್ತು. ನಮ್ಮ ಪಿಇಟಿ ಮೇಷ್ಟ್ರು ಅಲ್ಲಿಯೇ ಡ್ರಿಲ್, ವ್ಯಾಯಾಮ ಎಲ್ಲಾ ಮಾಡಿಸ್ತಿದ್ರು. ಏಳನೇ ಬ್ಲಾಕ್, ಒಂಬತ್ತನೇ ಬ್ಲಾಕ್ ಎಲ್ಲಾ ಇರಲೇ ಇಲ್ಲ. ನಾಲ್ಕನೇ ಬ್ಲಾಕ್ವರೆಗೆ ಬಸ್ಗಳು ವಿರಳವಾಗಿ ಬರುತ್ತಿದ್ದವು.
</p><p>ತಂದೆ ವೈದ್ಯರಾಗಿದ್ದುದರಿಂದ ಅವರ ಸೇವೆಯನ್ನು ನಾನು ಸಮೀಪದಿಂದ ನೋಡುತ್ತಿದ್ದೆ. ಹಾಗಾಗಿ ನಾನೂ ವೈದ್ಯಕೀಯ ಶಿಕ್ಷಣ ಓದಲು ನಿರ್ಧರಿಸಿದೆ. ವೈದ್ಯಕೀಯ ಪದವಿ ಓದಿದ್ದು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ. ಅದಾದ ಮೇಲೆ ಇಲ್ಲೇ, ಆರ್.ಬಿ.ಐ. ಮುಂಭಾಗದಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಒಂದು ವರ್ಷ ಸೀನಿಯರ್ ಹೌಸ್ಮನ್ ಮತ್ತು ಒಂದು ವರ್ಷ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಿದೆ. ಅದಾದ ಮೇಲೆ ಬಾಂಬೆಯಲ್ಲಿ ಬಿ.ಜೆ. ವಾಡಿಯಾ ಚಿಲ್ಡ್ರನ್ಸ್ ಹಾಸ್ಪಿಟಲ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದಿದೆ. ಅದು ಪೀಡಿಯಾಟ್ರಿಕ್ಸ್ ಕುರಿತು ಡಿ.ಸಿ.ಎಚ್.ಎಚ್. (ಡಿಪ್ಲೊಮಾ ಇನ್ ಚೈಲ್ಡ್ ಹೆಲ್ತ್) ಮಾಡಿ ಅಲ್ಲಿಯೇ ಒಂದು ವರ್ಷ ಕೆಲಸ ಮಾಡಿದೆ.</p><p>ಡಿ.ಸಿ.ಎಚ್.ಎಚ್. ಮುಗಿದದ್ದು 1979ರಲ್ಲಿ. ಅದಕ್ಕೂ ಆರು ತಿಂಗಳಿಗೆ ಮುಂಚೆ, ಬೆಂಗಳೂರಿನವಳೇ ಆದ ಉಮಾ ಜೊತೆ ನನ್ನ ಮದುವೆ ನಿಶ್ಚಿತಾರ್ಥವಾಗಿತ್ತು. ಹಾಗಾಗಿ ಬೆಂಗಳೂರಿಗೆ ಬಂದು ಒಂದು ತಿಂಗಳಿಗೆಲ್ಲ ನನ್ನ ಮದುವೆಯಾಯ್ತು. ಅದಾಗಿ ಕೆಲವೇ ತಿಂಗಳಿಗೆ ಹನುಮಂತನಗರದಲ್ಲಿ ಕ್ಲಿನಿಕ್ ತೆರೆದೆ. ಅದೇ ಹೊತ್ತಿಗೆ ಜಯನಗರ ನಾಲ್ಕನೇ ಬ್ಲಾಕ್ನಲ್ಲಿ ತಂದೆ ಕ್ಲಿನಿಕ್ ನಡೆಸುತ್ತಿದ್ದರು. ನಾನು ಅವರ ಕ್ಲಿನಿಕ್ ಮತ್ತು ಹನುಮಂತನಗರದ ನನ್ನ ಕ್ಲಿನಿಕ್ನಲ್ಲಿ ಮಕ್ಕಳನ್ನು ನೋಡುತ್ತಿದ್ದೆ.</p><p>ಎರಡೂ ಕಡೆ 15 ವರ್ಷ ಪ್ರಾಕ್ಟೀಸ್ ಮಾಡಿದ ನಂತರ ಬಸವನಗುಡಿಯ ಪೊಲೀಸ್ ರಸ್ತೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಕ್ಲಿನಿಕ್ ತೆರೆದೆವು. ತಂದೆ ಶಿಸ್ತಿಗೆ ಹೆಸರಾಗಿದ್ದರು. ಜೊತೆಯಾಗಿ ಕ್ಲಿನಿಕ್ ನಡೆಸುತ್ತಿದ್ದಾಗ ನಾನು ಅವರಿಗೆ ಪ್ರತಿ ರೂಪಾಯಿಗೂ ಲೆಕ್ಕ ತೋರಿಸಬೇಕಾಗಿತ್ತು. ಅದು ನನಗೆ ಬೇಸರದ ಸಂಗತಿಯಾಗಿರಲಿಲ್ಲ. ನನ್ನ ತಂದೆ ಈಗ ಇಲ್ಲ. ಅವರು ಪಾಲಿಸಿ ತೋರಿಸಿದ ಆದರ್ಶಗಳು ನನ್ನೊಂದಿಗಿವೆ. ನನ್ನ ತಾಯಿಗೆ ಈಗ 90 ವರ್ಷ. ಅವರು ಬಿ.ಎ. ಆನರ್ಸ್ ಓದಿದ್ದಾರೆ. ಮದುವೆಗೂ ಮುಂಚೆ ಕೆಲಸಕ್ಕೂ ಹೋಗ್ತಿದ್ರಂತೆ.</p><p>1979–80ರಲ್ಲಿ ಬೆಂಗಳೂರಿನಲ್ಲಿ ಒಟ್ಟು 35 ಮಂದಿ ಮಕ್ಕಳ ತಜ್ಞರು ಇದ್ದರು. ಈಗ ನಮ್ಮ ಪೀಡಿಯಾಟ್ರಿಷಿಯನ್ಸ್ ಸಂಘದಲ್ಲಿ 1200 ವೈದ್ಯರಿದ್ದಾರೆ. ಮಕ್ಕಳ ತಜ್ಞರಿಗೆ ಬೆಂಗಳೂರಿನಲ್ಲಿ ಈಗ ಬಹಳ ಬೇಡಿಕೆ ಇದೆ. ಆದರೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ, ಖಾಸಗಿಯಲ್ಲೂ ಮಕ್ಕಳ ತಜ್ಞರ ಕೊರತೆ ಇದೆ. ಸೌಕರ್ಯಗಳ ಕೊರತೆಯ ನೆಪ ಹೇಳಿಕೊಂಡು ಯುವ ವೈದ್ಯರೂ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ತುರ್ತು ಮತ್ತು ಅಗತ್ಯ ಚಿಕಿತ್ಸೆ ಸಿಗುತ್ತಿಲ್ಲ. ಇದು ನನಗೆ ಯಾವತ್ತೂ ಕಾಡುವ ಸಂಗತಿ. ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಅಲ್ಲಿ ಖಾಸಗಿ ಕ್ಷೇತ್ರದಲ್ಲಿಯೂ ಪೀಡಿಯಾಟ್ರಿಕ್ಸ್ಗೆ ಸಂಬಂಧಿಸಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು.</p><p><strong>ಒಂದು ಚಿತ್ರ, ಎರಡು ಬಿಸ್ಕತ್ತು ಮತ್ತು ಇಂಜೆಕ್ಷನ್!</strong></p><p>ನಾನು ಆಗಲೇ ಹೇಳಿದಂತೆ ಮಕ್ಕಳೊಂದಿಗೆ ಮೊದಲು ಸ್ನೇಹಿತನಂತೆ ವರ್ತಿಸಿ ಆಮೇಲೆ ನಿಧಾನವಾಗಿ ಅವರ ವಿಶ್ವಾಸ ಗಳಿಸಿ ತಪಾಸಣೆಗೆ ಮುಂದಾಗುತ್ತೇನೆ.</p><p>ಮಕ್ಕಳಿಗೆ ಲಸಿಕೆ ಹಾಕುವಲ್ಲಿಂದ ವೈದ್ಯರ ಬಗೆಗೆ ಭಯ ಶುರುವಾಗಿರುತ್ತದೆ. ಮೊದಲ ವ್ಯಾಕ್ಸೀನ್ ವೇಳೆಗೆ ತುಂಬಾ ಎಳೆಯವರಾಗಿರುತ್ತಾರೆ. ಹಾಗಾಗಿ ನೋವು ಮಾತ್ರ ಗೊತ್ತಾಗುತ್ತದೆ. ಆದರೆ ಎರಡನೇ ಮತ್ತು ಮೂರನೇ ವ್ಯಾಕ್ಸೀನ್ ವೇಳೆಗೆ, ‘ನಂಗೆ ನೋವು ಮಾಡಿದೋನು ಇವನೇ’ ಎಂದು ಗುರುತು ಸಿಕ್ಕಿಬಿಡುತ್ತದೆ. ಅಲ್ಲಿಂದ ಅವರು ನಮ್ಮಿಂದ ದೂರವಿರಲು ಬಯಸುತ್ತಾರೆ. ಹಾಗಾದಾಗ ಅವರ ಆರೋಗ್ಯ ತಪಾಸಣೆ, ವ್ಯಾಕ್ಸೀನ್, ಅಗತ್ಯ ಇಂಜೆಕ್ಷನ್ ಕೊಡೋದು ನಮಗೆ ಸವಾಲಾಗುತ್ತದೆ.</p><p>ಮಕ್ಕಳು ಅಳದಂತೆ ವ್ಯಾಕ್ಸೀನ್ ಹಾಕೋದೂ ಒಂದು ಕಲೆ. ಅದಕ್ಕೆ ನಾನು ಏನ್ಮಾಡ್ತೀನಿ ಗೊತ್ತಾ? ಪ್ರಾಣಿಗಳ ಚಿತ್ರವನ್ನು ಮಗುವಿನ ಕೈಗೆ ಕೊಡುತ್ತೇನೆ. ಇದು ಚಿರತೆ, ಹುಲ್ಲುಗಾವಲು, ಮರ, ಗಿಡ ಅಂತ ಅದರ ಅಮ್ಮ ಚಿತ್ರವನ್ನು ಮಗುವಿನ ಮುಖದ ಮುಂದೆ ಹಿಡಿದು ಕತೆ ಹೇಳುತ್ತಾರೆ. ನಮ್ಮ ನರ್ಸ್ ಅವರೊಂದಿಗೆ ಸೇರಿಕೊಳ್ಳುತ್ತಾರೆ. ಮಗು ನನ್ನನ್ನು ಮರೆತು ಅಳು ನಿಲ್ಲಿಸುವ ಹೊತ್ತಿಗೆ ನಾನು ಮೆತ್ತಗೆ ಹೋಗಿ ಇಂಜೆಕ್ಷನ್ ಚುಚ್ಚಿ ಬಂದು ಒಳಗಿನ ಕೋಣೆಗೆ ಹೋಗಿಬಿಡುತ್ತೇನೆ. ಮಗುವಿಗೆ ನೋವಿನ ಅನುಭವ ಆಗುವಾಗ ಸುತ್ತ ನೋಡುತ್ತದೆ. ಅಮ್ಮ ಮತ್ತು ನರ್ಸ್ ಮಾತ್ರ ಇರುತ್ತಾರೆ! ಮಗುವನ್ನು ಮತ್ತೆ ನನ್ನ ಹತ್ತಿರ ಕರೆತಂದಾಗ ನಾನು ಬಿಸ್ಕತ್ತು ಕೊಡುತ್ತೇನೆ.</p><p>ಎಷ್ಟೋ ಮಕ್ಕಳು ನನ್ನನ್ನು ಬಿಸ್ಕತ್ತು ಡಾಕ್ಟರ್ ಅಂತಲೇ ಕರೀತಾರೆ. ಮುಂಚೆ ನಾನು ಕ್ರ್ಯಾಕ್ಜ್ಯಾಕ್ ಬಿಸ್ಕತ್ತು ಕೊಡುತ್ತಿದ್ದೆ. ಒಂದು ಸಲ ಒಂದು ಮಗು ಅದರ ಅಮ್ಮನಿಗೆ, ‘ನೋಡಮ್ಮಾ, ಇವರೇ ಕ್ರ್ಯಾಕ್ ಡಾಕ್ಟರ್’ ಅಂತ ಹೇಳಿತು! ಅವತ್ತೇ<br/> ಕೊನೆ ಆಮೇಲೆ ಆ ಬಿಸ್ಕತ್ತು ಕೊಟ್ಟಿಲ್ಲ.</p><p>**</p><p><strong>ಪರಿಚಯ</strong></p><p><strong>ಪತ್ನಿ:</strong> ಉಮಾ</p><p><strong>ಮಕ್ಕಳು: </strong>ಅಖಿಲ್, ಆದಿತ್ಯ</p><p><strong>ವಿಳಾಸ:</strong> ನಂ. 56, ಜಯ್ ಕ್ಲಿನಿಕ್, ಬ್ಯಾಂಕ್ ಆಫ್ ಬರೋಡಾ ಬಳಿ, ಪೊಲೀಸ್ ರಸ್ತೆ, ಬಸವನಗುಡಿ.<br/> ಸಂಪರ್ಕಕ್ಕೆ: 98451 92369</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.