ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರಿಗೆ ಬಾರದ ಸಾರಿಗೆ ಬಸ್ಸುಗಳು: ಪ್ರತಿಭಟನೆ ಎಚ್ಚರಿಕೆ

Published 12 ಡಿಸೆಂಬರ್ 2023, 13:23 IST
Last Updated 12 ಡಿಸೆಂಬರ್ 2023, 13:23 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕು ಕೇಂದ್ರಕ್ಕೆ ರಾಜಹಂಸ ಮತ್ತು ಸುವಿಹಾರಿ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ಬಸ್ಸುಗಳು ಬಂದು ಹೋಗಬೇಕೆಂಬ ಇಲಾಖೆ ಅದೇಶವಿದ್ದರೂ, ಕೆಲವು ಬಸ್‌ಗಳು ಪಟ್ಟಣ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದನ್ನು ವಿರೋಧಿಸಿ, ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಸಾರಿಗೆ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸ್ ಇನ್‌ಸ್ಪೆಕ್ಟರ್‌ ಗಂಗಾದರ್ ಅವರಿಗೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರು ರಾತ್ರಿ ವೇಳೆಯಲ್ಲಿ ಆಲೂರು ಪಟ್ಟಣದ ನಿಲ್ದಾಣಕ್ಕೆ ಬಾರದೆ, ಆಲೂರು ಕೂಡಿಗೆಯ ಬೈಪಾಸ್‌ನಿಂದ ನೇರ ಸಕಲೇಶಪುರ ಮತ್ತು ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಚಾಲಕ, ನಿರ್ವಾಹಕರು ಪ್ರಯಾಣಿಕರೊಡನೆ ಉಡಾಫೆ ಉತ್ತರ ನೀಡುವ ಮೂಲಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.

ಹಾಸನದಿಂದ ಆಲೂರಿಗೆ ಟಿಕೆಟ್ ಪಡೆದುಕೊಂಡ ಪ್ರಯಾಣಿಕರನ್ನು, ಆಲೂರು ಬೈಪಾಸ್ ಕೂಡಿಗೆಯಲ್ಲಿ ಅಥವಾ ಬೈರಾಪುರ ಸರ್ಕಲ್‍ನಲ್ಲಿ ಇಳಿಸಿದ್ದಾರೆ.  ಪಟ್ಟಣಕ್ಕೆ ಸುಮಾರು ಎರಡು ಕಿ.ಮೀ. ನಡೆದು ಬರಲು ರಾತ್ರಿ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರು ತೀವ್ರ ಭಯಪಡುತ್ತಾರೆ. ಅನಾಹುತ, ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು, ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಕೂಡಲೆ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ರವರು ಸಾರಿಗೆ ಇಲಾಖೆ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.   ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT