ಬೇಲೂರು: ಇಲ್ಲಿನ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿತ ಮೀಸಲಾತಿಗೆ ಸೇರದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಶುಕ್ರವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
ಉಪಾಧ್ಯಕ್ಷರ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಆದರೆ, ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಪರಿಶಿಷ್ಟ ಪಂಗಡಕ್ಕೆ (ಹಕ್ಕಿಪಿಕ್ಕಿ ಜನಾಂಗ) ಸೇರಿದವರಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ಸಕಲೇಶ ಪುರ ಉಪವಿಭಾಗಾಧಿಕಾರಿ ಆರ್.ಗಿರೀಶ್ ನಂದನ್ ಅವರು ಈ ನಾಮಪತ್ರ ತಿರಸ್ಕರಿಸಿ ಚುನಾವಣೆ ಮುಂದೂಡಿದರು.
ತಾಲ್ಲೂಕು ಪಂಚಾಯಿತಿಯಲ್ಲಿ 17 ಸದಸ್ಯರಿದ್ದು, ಜೆಡಿಎಸ್ ಪಕ್ಷ ಅಧಿಕಾರ ನಡೆಸಿಕೊಂಡು ಬರುತ್ತಿದೆ. ಮೊದಲ ಬಾರಿಗೆ ತೀರ್ಥಮ್ಮ, ಎರಡನೇ ಬಾರಿಗೆ ಕಮಲಮ್ಮ, ಮೂರನೇ ಬಾರಿಗೆ ಜಮುನಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಜಮುನಾ ರಾಜೀನಾಮೆ ನೀಡಿದ ಕಾರಣ ಸರ್ಕಾರ ಚುನಾವಣೆ ಘೋಷಣೆ ಮಾಡಿತ್ತು. ಪರಿಶಿಷ್ಟ ಪಂಗಡದ (ಹಕ್ಕಿಪಿಕ್ಕಿ ಜನಾಂಗದ) ಸದಸ್ಯೆ ಸಂಗೀತಾ ಲೋಕ್ಕುಮಾರ್ ನಾಮಪತ್ರ ಸಲ್ಲಿಸಿದ್ದರು.