ಹಾಸನ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿರುವ ಅತ್ಯಾಚಾರದ ದೂರಿಗೆ ಸಂಬಂಧಿಸಿದಂತೆ, ಸಂಸದ ಪ್ರಜ್ವಲ್ ರೇವಣ್ಣ ಅವರ ನಗರದ ನಿವಾಸಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಎಸ್ಐಟಿ ತಂಡ, ಸ್ಥಳದ ಮಹಜರು ನಡೆಸಿತು.
‘ಅಹವಾಲು ಹೇಳಿಕೊಳ್ಳಲು ಸಂಸದರ ನಿವಾಸಕ್ಕೆ ಬಂದಾಗ, ಕೋಣೆಗೆ ಕರೆದು ಗನ್ ತೋರಿಸಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು’ ಎಂದು ಸಂತ್ರಸ್ತೆ ದೂರು ನೀಡಿದ್ದರು. ಅದರಂತೆ, ಸಂತ್ರಸ್ತೆ ಹಾಗೂ ಆಕೆಯ ಪತಿಯನ್ನು ಸಂಸದರ ನಿವಾಸಕ್ಕೆ ಕರೆತಂದು ಅಧಿಕಾರಿಗಳು ಸ್ಥಳದ ಮಹಜರು ನಡೆಸಿದರು.
ನಿವಾಸದ ಹಾಲ್, ಮೇಲ್ಭಾಗದಲ್ಲಿರುವ ಕೋಣೆಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲಿಸಿದರು. ವಿಡಿಯೊದಲ್ಲಿರುವ ದೃಶ್ಯಾವಳಿಗಳು ಹಾಗೂ ಕೋಣೆಯಲ್ಲಿನ ಚಿತ್ರಣಗಳನ್ನು ಹೋಲಿಸಿ ನೋಡಿದರು. ಅಲ್ಲದೇ, ಪ್ರಜ್ವಲ್ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಕೋಣೆಯ ಪ್ರತಿಭಾಗವನ್ನೂ ತಪಾಸಣೆಗೊಳಪಡಿಸಿದರು.
ಡಿವೈಎಸ್ಪಿ ಸತ್ಯ ನಾರಾಯಣ್ ಸಿಂಗ್, ಸುಮಾರಾಣಿ ನೇತೃತ್ವದಲ್ಲಿ ಎಸ್ಐಟಿ ಇನ್ಸ್ಪೆಕ್ಟರ್ ಸ್ವರ್ಣಾ, ಸಬ್ ಇನ್ಸ್ಪೆಕ್ಟರ್ ಕುಮುದಾ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುತ್ತಲೂ ನೂರಾರು ಜನ ನೆರೆದು, ಎಸ್ಐಟಿ ತಂಡದ ಭೇಟಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಶನಿವಾರ ಸಂಜೆ ಹಾಸನದ ಸಂಸದರ ನಿವಾಸಕ್ಕೆ ಬಂದ ಎಸ್ಐಟಿ ಅಧಿಕಾರಿಗಳು.