ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೀಸಾವೆ: ರಥೋತ್ಸವ ಇಲ್ಲ; ದೇವರ ಉತ್ಸವ

Published 8 ಮಾರ್ಚ್ 2024, 7:11 IST
Last Updated 8 ಮಾರ್ಚ್ 2024, 7:11 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಏಳು ಗ್ರಾಮಗಳಾದ ಮಾದಲಗೆರೆ, ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ. ಚಿಕ್ಕೇನಹಳ್ಳಿ, ಎಂ.ಕೆ. ಹೊಸೂರು, ಲಕ್ಷ್ಮಿಪುರ, ರಂಗನಾಥಪುರದವರ ಸಹಯೋಗದಲ್ಲಿ, ಮಾದಲಗೆರೆ–ನಿಂಬೇಹಳ್ಳಿ ಮಧ್ಯದಲ್ಲಿ ಇರುವ ಶ್ರೀಮಹದೇಶ್ವರಸ್ವಾಮಿಯ 88ನೇ ವರ್ಷದ ಜಾತ್ರಾ ಮಹೋತ್ಸವವನ್ನು ಶಿವರಾತ್ರಿ ನಂತರ ಏಳು ದಿನ ಆಚರಿಸುತ್ತಾರೆ.

ಈ ವರ್ಷದ ಜಾತ್ರೆಯಲ್ಲಿ ಹಗ್ಗ–ಜಗ್ಗಾಟ, ಶ್ವಾನ ಓಟ, ಕ್ರಿಕೆಟ್ ಸ್ಪರ್ಧೆಗಳು ಮತ್ತು ‘ಕುರುಕ್ಷೇತ್ರ’ ನಾಟಕವನ್ನು ಏರ್ಪಡಿಸಲಾಗಿದೆ. ಹಗ್ಗ–ಜಗ್ಗಾಟದ ಪ್ರಥಮ ಬಹುಮಾನ, ಟಗರು, ಶ್ವಾನ ಓಟದ ಸ್ಪರ್ಧೆ ಪ್ರಥಮ ವಿಜೇತರಿಗೆ ₹ 20 ಸಾವಿರ ನಗದು ಬಹುಮಾನ ಇದೆ.

88 ವರ್ಷಗಳ ಹಿಂದೆ ನಿಂಬೇಹಳ್ಳಿಯ ಜಂಗಮ ಗುರುಬಸಪ್ಪ ಮತ್ತು ಮಾದಲಗೆರೆಯ ನಂಜಪ್ಪ ಎಂಬುವವರು, ಪಕ್ಕದ ತೋಟಿ ಗ್ರಾಮದ ಕೆರೆ ಹಿಂಭಾಗ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಏಳು ಪಾಣಿಪಟ್ಟಲಿನ ಶಿವಲಿಂಗವನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಜಾತ್ರೆ ಪ್ರಾರಂಭಿಸಿದರು ಎಂಬ ಇತಿಹಾಸ ಇದೆ ಎನ್ನುತ್ತಾರೆ ಮಾದಲಗೆರೆ ನಂಜೇಗೌಡ ಮತ್ತು ನಿಂಬೇಹಳ್ಳಿ ಶಿವರಾಂ.

ಜಾತ್ರೆಯಲ್ಲಿ ರಥೋತ್ಸವ ನಡೆಯುವುದಿಲ್ಲ. ಭಕ್ತರು ದೇವರ ಮೆರವಣಿಗೆ ಮಾಡುತ್ತಾರೆ. ದೇವರ ಮೂಲ ವಿಗ್ರಹದ ಎದುರಿಗೆ ದೇವಾಲಯದ ಎರಡನೇ ಅಂಗಳದಲ್ಲಿ ಬಿಲ್ವಪತ್ರೆ ಮರವಿದ್ದು, ಇದರ ಎಲೆಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸುತ್ತಾರೆ. ಏಳು ದಿನ ನಡೆಯುವ ಜಾತ್ರೆಯಲ್ಲಿ, ಕೆಲವು ಭಕ್ತರು ಮಹದೇಶ್ವರಸ್ವಾಮಿಯ ಮಾಲೆಯನ್ನು ಧರಿಸಿ, 7 ದಿನ ವ್ರತ ಆಚರಿಸುತ್ತಾರೆ. ಪ್ರತಿ ದಿನ ಅನ್ನದಾನ, ದೇವರ ಉತ್ಸವ, ಭಜನೆ ನಡೆಯುತ್ತದೆ.

ಮಾ. 9ರಂದು ಮಾದಲಗೆರೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಮೂಲಸ್ಥಾನಕ್ಕೆ ಕರೆತಂದು, ಗಂಗಾಪೂಜೆ ನಂತರ ಧ್ವಜಾರೋಹಣ ಮಾಡುವ ಮೂಲಕ ಭಕ್ತರು ಜಾತ್ರೆಗೆ ಚಾಲನೆ ನೀಡಲಿದ್ದಾರೆ.

ಮಾ.10ರಂದು ಚಿಕ್ಕೇನಹಳ್ಳಿ ಗ್ರಾಮಸ್ಥರಿಂದ ಕ್ರಿಕೆಟ್ ಪಂದ್ಯಾವಳಿ, ಮಾ. 12ರಂದು ಸಂಜೆ ಹಗ್ಗ–ಜಗ್ಗಾಟ ಸ್ಪರ್ಧೆ, ಮಾ. 13ರಂದು ಸ್ನೇಹಜೀವಿ ಗ್ರೇಹೌಂಡ್ ಕ್ಲಬ್ ಮತ್ತು ಮಾದಲಗೆರೆ ಗ್ರಾಮಸ್ಥರಿಂದ ಶ್ವಾನ ಓಟದ ಸ್ಪರ್ಧೆ, ಮಾ. 15ರಂದು ಬೆಳಿಗ್ಗೆ ಚನ್ನರಾಯಟಪಟ್ಟಣ ಸ್ವಯಂಪ್ರೇರಿತ ರಕ್ತ ಕೇಂದ್ರ ಮತ್ತು ಹಾಸನದ ಇಂಡಿಯಾನಾ ಹಾರ್ಟ್ಸ್‌ಲೈನ್ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ ಹಾಗೂ ರಾತ್ರಿ 8 ಗಂಟೆಗೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿವೆ.

ರಾಜ್ಯದ ನಾನಾ ಭಾಗದಲ್ಲಿರುವ ದೇವರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ಸೇವೆ ಮಾಡುತ್ತಾರೆ.

ಮಹದೇಶ್ವರಸ್ವಾಮಿ
ಮಹದೇಶ್ವರಸ್ವಾಮಿ
ಭಕ್ತರ ಸಹಕಾರದಿಂದ ವಿದ್ಯುತ್ ದೀಪಾಲಂಕಾರ ಸೇರಿದಂತೆ ಜಾತ್ರೆ ನಡೆಸಲು ಸಕಲ ಸಿದ್ದತೆ ಮಾಡಲಾಗಿದೆ. ಭಕ್ತರು ನೀಡುವ ಕಾಣಿಕೆಯನ್ನು ಜಾತ್ರೆಗೆ ಬಳಸಲಾಗುವುದು
- ದಿನೇಶ್ ಗ್ರಾ.ಪಂ.ಸದಸ್ಯ ಮಾದಲಗೆರೆ
ಏಳು ದಿನವೂ ದೇವರಿಗೆ ವಿಶೇಷ ಪೂಜೆ ಮತ್ತು ಮೆರವಣಿಗೆ ನಡೆಯುತ್ತದೆ. ಜಾತ್ರೆ ಸಮಯದಲ್ಲಿ ಭಕ್ತರು ಸ್ವಾಮಿಗೆ ಹರಕೆಗಳನ್ನು ಸಲ್ಲಿಸುತ್ತಾರೆ.
ಕುಮಾರಸ್ವಾಮಿ ಅರ್ಚಕ ಮಾದಲಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT