ಹಾಸನ : ತಾಲ್ಲೂಕಿನ ಇಬ್ದಾಣೆ ಬಳಿ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದಾರೆ.
ಹಾಸನ ತಾಲ್ಲೂಕಿನ ಬಿದರಿನಕೆರೆ ಗ್ರಾಮದ ಚಂದನ್ (18), ಸಂತೊಷ್ ಕುಮಾರ್ (27) ರಮೇಶ್ (32) ಮೃತ ಯುವಕರು.
ಮಂಗಳವಾರ ರಾತ್ರಿ ಮೂವರು ಸ್ನೇಹಿತರು ಒಂದೇ ಬೈಕ್ನಲ್ಲಿ ಹಗರೆ ದೇವೀರಮ್ಮ ದೇವಾಲಯಕ್ಕೆ ಹೋಗಿ ಊಟ ಮುಗಿಸಿ, ವಾಪಸ್ ಬರುವ ವೇಳೆ ಹಾಸನ– ಬೇಲೂರು ರಸ್ತೆಯ ಇಬ್ದಾಣೆ ಗ್ರಾಮದ ಬಳಿ ಲಾರಿಯನ್ನು ಹಿಂದಿಕ್ಕುವ ಯತ್ನದಲ್ಲಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಂತೋಷ್ ಕುಮಾರ್, ಚಂದನ್ ಮೃತಪಟ್ಟರೇ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಮೇಶ್ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಅಸುನೀಗಿದರು.
ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮೃತ ಯುವಕರು ಸ್ನೇಹಿತರಾಗಿದ್ದು, ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು. ನೆರೆಹೊರೆಯವರು ಹಾಗೂ ಸಂಬಂಧಿಕರು ಪೋಷಕರನ್ನು ಸಮಾಧಾನ ಪಡಿಸಲು ಯತ್ನಿಸಿದರು.