ಹಳೇಬೀಡು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳು ಎನಿಸಿಕೊಂಡಿರುವ ಮತದಾರರು ಚಲಾಯಿಸುವ ಮತ ಮೌಲ್ಯಯುತವಾಗಿರುತ್ತದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿ ಮತದಾನ ಮಾಡಬೇಕು’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಉಮೇಶ್ ಸಲಹೆ ನೀಡಿದರು.
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು 18 ತುಂಬಿದಾಕ್ಷಣ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ನೆರೆಹೊರೆಯವರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಸಲಹೆ ಕೊಡಬೇಕು. ಮತದಾನದಿಂದ ದೇಶವನ್ನು ಮುನ್ನಡೆಸಲು ಸಾಧ್ಯ. ಹೀಗಾಗಿ ಎಲ್ಲರೂ ಮತದಾನದ ಮಹತ್ವವನ್ನು ತಿಳಿಯಬೇಕು’ ಎಂದರು.
ಪ್ರಾಂಶುಪಾಲ ವಸಂತಕುಮಾರ್ ವಿ. ಮಾತನಾಡಿ, ‘ಮತದಾನದ ಹಕ್ಕು ಸವಲತ್ತು ಅಲ್ಲ. ಅದು ಪ್ರತಿ ಭಾರತೀಯನ ಮೂಲಭೂತ ಹಕ್ಕು. ಶೇ 100ರಷ್ಟು ಮತದಾನ ಮಾಡುವುದರಿಂದ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬಹುದು’ ಎಂದು ಹೇಳಿರು.
ಸಂವಿಧಾನದಲ್ಲಿ ಮತದಾನದ ಪ್ರಾಮುಖ್ಯತೆ ಕುರಿತು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮಹೇಶ್ ಆರ್.ಎಸ್, ಮತದಾನದ ಶ್ರೇಷ್ಠತೆ ಕುರಿತು ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ದಿನೇಶ್ ಎಂ.ಸಿ. ವಿವರಿಸಿದರು.
ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಲಾಯಿತು. ವಿದ್ಯಾರ್ಥಿಗಳು ಮತಯಂತ್ರದ ಬಟನ್ ಒತ್ತಿ ಮತದಾನ ಮಾಡುವ ವಿಧಾನವನ್ನು ತಿಳಿದುಕೊಂಡರು.
ಪಿಡಿಒ ಎಸ್.ಸಿ.ವಿರೂಪಾಕ್ಷ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಈರೇಗೌಡ, ಗ್ರಂಥಪಾಲಕ ಮನೋಜ್ ಕುಮಾರ್, ಪ್ರಾಧ್ಯಾಪಕ ಸಂತೋಷ್ ಜೆ. ಇದ್ದರು.