ಅರಕಲಗೂಡು: ‘ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಜೆಡಿಎಸ್ ಸ್ಫರ್ಧಿಸಿರುವ ಮೂರು ಕ್ಷೇತ್ರಗಳನ್ನು ಗೆಲ್ಲಿಸಿಕೊಳ್ಳುವುದಲ್ಲದೇ, ಉಳಿದ ಕ್ಷೇತ್ರಗಳಲ್ಲೂ ಪಕ್ಷದ ಶಕ್ತಿಯನ್ನು ಬಿಜೆಪಿಗೆ ಕೊಡಿಸುವ ಮೂಲಕ ಸಿದ್ದರಾಮಯ್ಯ ಮಾತಿಗೆ ತಕ್ಕ ಉತ್ತರ ನೀಡುವೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಗುರುವಾರ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ‘ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಬಿಜೆಪಿ 18 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ನಾಲ್ಕು ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ ಎಂದು ಹೇಳುತ್ತೀರಾ? ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಪಕ್ಷವು ಸುಭದ್ರವಾಗಿದ್ದಿದ್ದರೆ ರಾಹುಲ್ ಗಾಂಧಿ ಕೇರಳಕ್ಕೆ ಏಕೆ ಹೋಗುತ್ತಿದ್ದರು? ಸೋನಿಯಾ ಗಾಂಧಿ ರಾಜ್ಯಸಭೆಗೆ ಏಕೆ ಹೋದರು?’ ಎಂದು ಅವರು ಪ್ರಶ್ನಿಸಿದರು.
‘ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದರ ಫಲವನ್ನು ಬೆಂಗಳೂರಿನ ಜನ ಈಗ ಅನುಭವಿಸಬೇಕಾಗಿದೆ. ಬರಗಾಲವಿದ್ದು, ನೀರು ಹರಿಸಲು ಸಾಧ್ಯವಿಲ್ಲ ಎಂಬ ದಿಟ್ಟ ಉತ್ತರ ನೀಡಿದ್ದರೆ, ಇಂದು ಜನರು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.