ಹಿರೀಸಾವೆ: ಹೋಬಳಿಯ ಎಂ.ಕೆ ಹೊಸೂರು ಗ್ರಾಮದಲ್ಲಿ ಕೃಷಿ ಭೂಮಿ ಮೂಲಕ ಗಣಿಗಾರಿಕೆಯ ಕಲ್ಲು ಸಾಗಣೆ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು ಜಮೀನಿಗೆ ತಂತಿಬೇಲಿ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಈ ಮೂಲಕ ರೈತರ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಮುಂದುವರೆಯಿತು.
ಹೊಲದಲ್ಲಿ ಗಣಿ ಲಾರಿಗಳು ಸಂಚರಿಸದಂತೆ ಹಗಲು, ರಾತ್ರಿ ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಗ್ರಾಮದ ಪಕ್ಕದಲ್ಲಿ ಅಲಂಕಾರಿಕ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆ ವಿರೋಧಿಸಿ ಎರಡು ವರ್ಷದಿಂದಲೂ ಗ್ರಾಮದ ಕೆಲವು ರೈತ ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ. ಗಣಿಗಾರಿಕೆಯಿಂದ ತೆಗೆದ ಕಲ್ಲುಗಳನ್ನು ಲಾರಿಗಳಲ್ಲಿ ಜಮೀನಿನ ಮೂಲಕ ಸಾಗಿಸಲಾಗುತ್ತಿತ್ತು. ಇತ್ತೀಚೆಗೆ ಕಂದಾಯ ಇಲಾಖೆ ಅಳತೆ ಮಾಡಿದಾಗ, ದಾರಿಯ ಜಾಗ ಕೃಷ್ಣೇಗೌಡ ಮತ್ತು ತಿಮ್ಮಮ್ಮ ಎಂಬುವವರಿಗೆ ಸೇರಿದ ಭೂಮಿ ಯಾಗಿದೆ ಎಂದು ವರದಿ ನೀಡಿತು.
ಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿ ರಲಿಲ್ಲ. ಇದರಿಂದ ಕುಪಿತಗೊಂಡ ರೈತರು ಮಂಗಳವಾರ ರಾತ್ರಿಯಿಂದ ದಾರಿಗೆ ಅಡ್ಡಲಾಗಿ ಕೂತು ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದರು. ಬುಧವಾರ ಬೆಳಿಗ್ಗೆ ತಂತಿ ಬೇಲಿ ಹಾಕುವ ಮೂಲಕ ಪ್ರತಿಭಟನೆ ಮುಂದುವರಿಸಿದರು.
‘ಗಣಿ ಮಾಲೀಕರು ನಕಾಶೆ ದಾರಿಯಲ್ಲಿ ಕಲ್ಲು ಸಾಗಿಸಲಿ, ಅಕ್ಕಪಕ್ಕದ ಜಮೀನಿನ ರೈತರಿಗೆ ತೊಂದರೆಯಾಗ ದಂತೆ ಲಾರಿಗಳು ಸಂಚರಿಸ ಬೇಕು. ಕಲ್ಲು ಸಾಗಿಸಲು ಸರ್ಕಾರದಿಂದ ಪಡೆದಿರುವ ಪರವಾನಗಿ ನಮಗೆ ತೋರಿಸಬೇಕು’ ಎಂದು ಕೆಲವು ರೈತ ಮಹಿಳೆಯರು ಆಗ್ರಹಿಸಿದರು.