ಅರಸೀಕೆರೆ: ತಾಲ್ಲೂಕಿನ ಹೆಬ್ಬಾರನಹಳ್ಳಿ ಸಮೀಪದ ಜಮೀನೊಂದರಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆ ಸ್ಥಳಕ್ಕೆ ಶನಿವಾರ ತಹಶೀಲ್ದಾರ್ ಎನ್.ವಿ.ನಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತ ಮುಂಖಂಡರು ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯಿಸಿದರು.
ರೈತ ಸಂಘದ ಮುಖಂಡ ಡಿ.ಕೆ.ನಿಂಗೇಗೌಡ ‘ರೈತರ ಜಮೀನಿನ ಬಳಿಯಲ್ಲೇ 5 ವರ್ಷಗಳಿಂದ ವ್ಯಕ್ತಿಯೊಬ್ಬರು ನಿರಂತರವಾಗಿ ಗ್ರಾನೈಟ್ ಗಣಿಗಾರಿಕೆ ನಡೆಸುತ್ತಿದ್ದಾರೆ.
ಕಲ್ಲು ಸ್ಫೋಟಿಸಲು ಬಳಸುವ ಸ್ಫೋಟಕ ಸಾಮಗ್ರಿಗಳಿಂದ ಹೆಬ್ಬಾರನಹಳ್ಳಿ ಗ್ರಾಮದ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟು ಹಾನಿಗೀಡಾಗಿವೆ. ಅಲ್ಲದೆ, ಈ ಪ್ರದೇಶದ ಸುತ್ತಮುತ್ತ ಕೃಷಿ ಜಮೀನುಗಳಿಗೆ ದೂಳು ಆವರಿಸಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ’ ಎಂದು ಅವರು ದೂರಿದರು.
‘ಜಿಲ್ಲಾಡಳಿತ ಈ ಕೂಡಲೇ ಗಣಿಗಾರಿಕೆ ಸ್ಥಗಿತಕ್ಕೆ ಆದೇಶ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಾವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಆಕ್ರೋಶ: ತಹಶೀಲ್ದಾರ್ ನಟೇಶ್ ಸ್ಥಳಕ್ಕೆ ಬರುತ್ತಿದ್ದಂತೆ ಕೃಷಿಕರು ಹಾಗೂ ಮಹಿಳೆಯರು ‘ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಗಣಿಗಾರಿಕೆಯಿಂದ ನಿತ್ಯದ ಬದುಕು ಬೀದಿಗೆ ಬೀಳುವ ಅಪಾಯ ವಿದ್ದು, ನಮಗೆ ನ್ಯಾಯ ಒದಗಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ನಟೇಶ್ ಮಾತನಾಡಿ, ದೂರುದಾರರು ಹಾಗೂ ಗ್ರಾಮಸ್ಥರಿಂದ ಸಮಗ್ರ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗು ವುದು’ ಎಂದು ಹೇಳಿದರು.
ಅರಸೀಕೆರೆ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಮೇಶ್, ಪಿಎಸ್ಐ ಪುರಷೋತ್ತಮ್ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್, ಮುಖಂಡ ಬೋರನಕೊಪ್ಪಲು ಶಿವಲಿಂಗಪ್ಪ, ಹಾರನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರೀಂಸಾಬ್, ರಿಯಾಜ್, ಅಜ್ಮತ್, ಅಕ್ಮಲ್ಖಾನ್ ಇದ್ದರು.
***
ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ನಿಲುಗಡೆಗೆ ಆದೇಶ ಹೊರಡಿಸಿದರೆ ಸೂಚನೆ ಪಾಲಿಸಲಾಗುವುದು
ಅತೀಕ್ ಪಾಷಾ, ಗಣಿ ಮಾಲೀಕ