ಚನ್ನರಾಯಪಟ್ಟಣ: ‘ಸಿರಿಧಾನ್ಯದ ಆಹಾರ ಸೇವನೆ ಯಿಂದ ಉತ್ತಮ ಆರೋಗ್ಯ ರಕ್ಷಣೆ ಸಾಧ್ಯ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಕಲ್ಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಹಿಂದೆ ಸಿರಿಧಾನ್ಯ ಹೆಚ್ಚು ಬೆಳೆಯುತ್ತಿದ್ದರು. . ಈ ದಿನ ಗಳಲ್ಲಿಯೂ ಸಿರಿಧಾನ್ಯ ಕೃಷಿ ಹೆಚ್ಚಿಸಲು ರೈತರಲ್ಲಿ ಅರಿವು ಮೂಡಿಸಬೇಕು ಎಂದರು. ಗ್ರಾಮಾಭಿವೃದ್ಧಿ ಯೋಜನೆ ಮುಖ್ಯಸ್ಥೆ ದಯಾಶೀಲಾ, ಸಿರಿಧಾನ್ಯಗಳಾದ ಸಜ್ಜೆ, ನವಣೆ, ಸಾಮೆ, ಊದಲು, ಹಾರಕ ಬೆಳೆಗಳ ಮಹತ್ವ ತಿಳಿಸಿಕೊಟ್ಟರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಶಂಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಗುರುಸಿದ್ದಪ್ಪ, ಪ್ರಗತಿಪರ ರೈತರಾದ ಬಸವರಾಜು, ಕೆ.ಜಿ. ಗಣೇಶ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಿ. ಮಂಜೇಗೌಡ, ಕೃಷಿ ಮೇಲ್ವಿಚಾರಕ ವಿನಾಯಕ್, ಸಾವಿತ್ರಿ ಇತರರು ಇದ್ದರು.